Latestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ
ವಿನಯ ಕುಲಕರ್ಣಿ ಭೇಟಿಯಾಗಲು ಹೋದ ಅಭಿಮಾನಿಗೆ ಹೃದಯಾಘಾತ: ಸಾವನಪ್ಪಿದ ಅಭಿಮಾನಿ ನೋಡಲು ಸ್ಥಳಕ್ಕೆ ಮಾಜಿ ಸಚಿವ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಭೇಟಿಯಾಗಲೆಂದು ಹೊರಟಿದ್ದ ಅವರ ಅಭಿಮಾನಿಯೊಬ್ಬರಿಗೆ ಹೃದಯಾಘಾತವಾಗಿ ಅವರು ಅರ್ಧ ದಾರಿಯಲ್ಲೇ ಅಸುನೀಗಿರುವ ಘಟನೆ ನಡೆದಿದೆ.
ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಪರಮೇಶ್ವರ ಗಾಣಿಗೇರ ಎಂಬಾತನೇ ಮೃತ ದುರ್ದೈವಿ. ಧಾರವಾಡ ಜಿಲ್ಲೆಗೆ ಆಗಮಿಸದಂತೆ ನ್ಯಾಯಾಲಯ ವಿನಯ ಅವರಿಗೆ ಸೂಚನೆ ನೀಡಿದ್ದರಿಂದ ವಿನಯ್ ಅವರು ಇದೀಗ ಬೆಂಗಳೂರಿನಲ್ಲೇ ವಾಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಭೇಟಿ ಮಾಡಲೆಂದು ಪರಮೇಶ್ವರ ಗಾಣಿಗೇರ ಅವರು ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ತುಮಕೂರಿನ ಬಳಿ ಅವರಿಗೆ ಹೃದಯಾಘಾತವಾಗಿ ಅಸುನೀಗಿದ್ದಾರೆ.
ತಮ್ಮ ಬೆಂಬಲಿಗನ ಸಾವಿನ ಸುದ್ದಿ ಕೇಳಿ ಸ್ವತಃ ವಿನಯ ಅವರೇ ತುಮಕೂರಿಗೆ ಬಂದು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ತಾವೇ ಮುಂದೆ ನಿಂತು ಪಾರ್ಥಿವ ಶರೀರವನ್ನು ಮರೇವಾಡ ಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು.



