ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕನಕಪುರದಿಂದ ವಿಧಾನಸೌಧಕ್ಕೆ ರೈತರ ಪಾದಯಾತ್ರೆಗೆ ಡಿ ಕೆ ಸುರೇಶ್ ಸಾಥ್

ರಾಮನಗರ: ಮೇಕೆದಾಟು ಯೋಜನೆಗೆ ಒತ್ತಾಯಿಸಿ ರೈತರು ರಾಮನಗರ ಜಿಲ್ಲೆಯ ಕನಕಪುರದ ಮೇಕೆದಾಟಿನಿಂದ ಪಾದಯಾತ್ರೆ ಕೈಗೊಂಡಿದ್ದು ಸಂಸದ ಡಿ.ಕೆ.ಸುರೇಶ್ ರೈತರ ಪಾದಯಾತ್ರೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದರು. ಕನಕಪುರದ ಮೇಕೆದಾಟಿನಿಂದ ವಿಧಾನ ಸೌಧದವರೆಗೆ ಪಾದಯಾತ್ರೆ ನಡೆಯಲಿದ್ದು ಒಟ್ಟು 5 ದಿನಗಳ ಕಾಲ ನಡೆಯಲಿದೆ.
ಈ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಈ ಯೋಜನೆಗೆ ಸುಪ್ರೀಂಕೋರ್ಟ್ ಆದೇಶ ಇದೇ. ಅಣೆಕಟ್ಟು ಕಟ್ಟಬಹುದು, ಆದರೆ ತಮಿಳುನಾಡಿಗೆ ಕೊಡಬೇಕಾದ ನೀರನ್ನ ಕೊಡಿ ಎಂದು ಆದೇಶ ನೀಡಿದೆ. ಯೋಜನೆಯಿಂದ ರಾಜ್ಯಕ್ಕೆ ಬಹಳಷ್ಟು ಅನುಕೂಲ ಇದೇ.ಇದರಿಂದಾಗಿ 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. 60 ಟಿಎಂಸಿ ಹೆಚ್ಚುವರಿ ನೀರನ್ನ ಶೇಕರಣೆ ಮಾಡಬಹುದು. ನಮ್ಮ ಭಾಗದ ರೈತರಿಗೆ ಸಾಕಷ್ಟು ಅನುಕೂಲ ಇದೆ ಎಂದರು.
ಕುಡಿಯುವ ನೀರು ನಮಗೆ ಸಿಗಲಿದೆ, ಆದರೆ ಈ ವಿಚಾರವಾಗಿ ಕೇಂದ್ರ ಸ್ಪಷ್ಟ ನಿರ್ಧಾರ ತಿಳಿಸಬೇಕು. ಪ್ರಧಾನಮಂತ್ರಿಗಳು ಸ್ಪಷ್ಟ ನಿಲುವನ್ನ ಹೇಳಬೇಕು. ಚುನಾವಣೆಗಳು ಬಂದಾಗ ಮಾತನಾಡ್ತಾರೆ. ಆದರೆ ಈಗ ಯಾವುದೇ ಚುನಾವಣೆ ಇಲ್ಲ. ಹಾಗಾಗಿ ಯೋಜನೆಯ ವಿಚಾರವಾಗಿ ತೀರ್ಮಾನ ಮಾಡಬೇಕು. ಇಲ್ಲವಾದರೆ ರಾಜ್ಯದ ಜನರಿಗೆ ದೊಡ್ಡ ಮೋಸ ಮಾಡಿದಂತೆ ಆಗುತ್ತೆ. ಬಿಜೆಪಿಯವರು ಯೋಜನೆ ಮಾಡಲಿ, ಅವರಿಗೆ ಹೆಸರು ಬರಲಿ,ಒಟ್ಟಾರೆ ಯೋಜನೆಯನ್ನ ಪ್ರಾರಂಭ ಮಾಡಲಿ ಎಂದು ತಿಳಿಸಿದರು.



