ಹೊನ್ನಾವರ: ಕಡ್ನೀರು ಭಾಗದಲ್ಲಿ ಡೆಂಗ್ಯೂ ಲಕ್ಷಣ

ಕಾರವಾರ : ಹೊನ್ನಾವರ ತಾಲೂಕಿನ ಚಂದಾವರ ಗ್ರಾ.ಪಂ.ವ್ಯಾಪ್ತಿಯ ಕಡ್ನೀರು ಭಾಗದಲ್ಲಿ ವಿಪರೀತವಾಗಿ ಡೆಂಗ್ಯೂ ಲಕ್ಷಣ, ಶೀತ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ರಮೇಶ ರಾವ್ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಉಷಾ
ಹಾಸ್ಯಗಾರ ಅವರು ಗ್ರಾಮಸ್ಥರ ಆರೋಗ್ಯ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಡ್ನೀರು ಭಾಗದಲ್ಲಿ ತೀವ್ರ ಜ್ವರ, ಶೀತದಿಂದ ಜನರು ಕಂಗಾಲಾಗಿದ್ದು,ಈ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಜನರ ಆರೋಗ್ಯ ಸ್ಥಿತಿಗತಿಗಳನ್ನು ವಿಚಾರಿಸಿತು. ಕಡ್ನೀರು ಭಾಗದಲ್ಲಿ 130 ಮನೆಗಳಿದ್ದು, 400 ರಷ್ಟು ಜನಸಂಖ್ಯೆ ಹೊಂದಿದೆ.ಈ ಭಾಗದಲ್ಲಿ ನಿಖರವಾಗಿ ಯಾವ ರೋಗ ಜನರನ್ನು ಕಾಡುತ್ತಿದೆ ಎಂದು ತಿಳಿಯಲು ತುರ್ತಾಗಿ ರಕ್ತ ಪರೀಕ್ಷೆ ಹಾಗೂ ಕೋವಿಡ್ ಟೆಸ್ಟ್
ಮಾಡಬೇಕು. ಕಡ್ನೀರು ಭಾಗದ ಪ್ರತಿಯೊಬ್ಬರ ಗಂಟಲು ದ್ರವ ಪರೀಕ್ಷೆ ಮಾಡಿಸುವುದು ಕಡ್ಡಾಯವೆಂದು ಆದೇಶ ಹೊರಡಿಸಲಾಗಿದೆ.
ಮೊದಲ ಹಂತದಲ್ಲಿ ಪ್ರತಿಯೊಬ್ಬರ ಕೋವಿಡ್ ರ್ಯಾಪಿಡ್ ಟೆಸ್ಟ್ ಮಾಡಿಸಬೇಕು.ಈ ಪರೀಕ್ಷೆಯಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಲ್ಲಿ ಅಂತವರಿಗೆ ರಕ್ತ ಪರೀಕ್ಷೆ ಅವಶ್ಯಕತೆ ಇರುವುದಿಲ್ಲ. ಯಾರಿಗೆ ಕೋವಿಡ್ ರ್ಯಾಪಿಡ್ ಟೆಸ್ಟ್ ನಲ್ಲಿ ಖಣಾತ್ಮಕ ಅಂಶ ಕಂಡುಬಂದಲ್ಲಿ ಅವರನ್ನು
ರಕ್ತಪರೀಕ್ಷೆಗೊಳಪಡಿಸಬೇಕು.
ವ್ಯಕ್ತಿಗೆ ರೋಗ ಲಕ್ಷಣ ಇಲ್ಲದೆಯೂ ಕೊರೋನಾ ಪಾಸಿಟಿವ್ ಬರುವ ಸಾಧ್ಯತೆ ಇದೆ.ಹೀಗಾಗಿ ಪ್ರತಿಯೊಬ್ಬರ ಕೋವಿಡ್ ಟೆಸ್ಟ್ ಅವಶ್ಯವಾಗಿ
ಮಾಡಿಸಬೇಕು ಎಂದರು. ಯಾರಿಗೆ ಕೊರೋನಾ ಪಾಸಿಟಿವ್ ಇದೆ ಅವರಿಗೆ ಮಾತ್ರೆಗಳನ್ನು ನೀಡಿ.ಸಕ್ಕರೆ ಕಾಯಿಲೆ ಪರೀಕ್ಷೆಯನ್ನೂ
ಮಾಡಿಸಬೇಕು.ಕೊರೋನಾ ಇರುವವರು ಹೋಮ್ ಐಷೋಲೇಷನ್ನಲ್ಲಿ ಇರುತ್ತಾರೆ.ಅಂತವರಿಗೂ ಸಕ್ಕರೆ ಖಾಯಿಲೆ ಬಗ್ಗೆಯೂ ಪರೀಕ್ಷೆ ಮಾಡಿ ವರದಿ ನೀಡಬೇಕು. ಸಕ್ಕರೆ ಖಾಯಿಲೆ ಪ್ರಮಾಣ ಜಾಸ್ತಿ ಇದ್ದರೆ ಅಂತವರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್ಗೆ ಕಳಿಸಬೇಕು ಎಂದು ಆಶಾ ಕಾರ್ಯಕರ್ತೆ ಶೈಲಾ ನಾಯ್ಕ ಅವರಿಗೆ ಸೂಚಿಸಿದರು.
ಎಲ್ಲಾ ಮನೆಗಳಿಗೂ ಫಾಗಿಂಗ್ ಮಾಡಿಸಿ
ಮಳೆ ಇಲ್ಲದ ಸಮಯವನ್ನು ನಿಗದಿಪಡಿಸಿಕೊಂಡು ಕಡ್ನೀರು ಭಾಗಕ್ಕೆ ಫಾಗಿಂಗ್ ಮಾಡಬೇಕು.ಸ್ಥಳೀಯ ಪಂಚಾಯತಿಗೆ ಭೇಟಿ ನೀಡಿ ಕೂಡಲೇ ಡೀಸೆಲ್ ಇತ್ಯಾದಿ ನೀಡುವಂತೆ ಹೇಳಿ.ಎಲ್ಲಾ ಮನೆಗಳಿಗೂ ಇನ್ಡೋರ್ ಫಾಗಿಂಗ್ ಮಾಡಬೇಕು ಎಂದು ಆರೋಗ್ಯ ನಿರೀಕ್ಷಕ ಆನಂದ ಅವರಿಗೆ ಸೂಚಿಸಿದರು.
ಹೊರ ಜಿಲ್ಲೆಯಿಂದ ಬಂದವರನ್ನು ಪತ್ತೆ ಹಚ್ಚಿ ಮಾಹಿತಿ ನೀಡಿ ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿರುವ ಈ ಸಮಯದಲ್ಲಿ ಹೊರ ಜಿಲ್ಲೆಗಳಿಂದ ಬರುವವರ ಮೇಲೆ ಸ್ಥಳೀಯರು ಹೆಚ್ಚು ನಿಗಾ ವಹಿಸಿ ಸಂಬಂಧ ಪಟ್ಟ ಆರೋಗ್ಯ ಇಲಾಖೆಗೆ, ಪೊಲೀಸ್ ಇಲಾಖೆಗೆ ಕೂಡಲೇ ಮಾಹಿತಿ ನೀಡಬೇಕು.ಈ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸುವುದು ಉತ್ತಮ ಎಂದರು.
ತಂಡ ರಚನೆ : ಯಾರು ಜ್ವರ ಇತ್ಯಾದಿ ಕಾಯಿಲೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರ ರಕ್ತ ಮತ್ತು ಕೋವಿಡ್ ಪರೀಕ್ಷೆ ತಕ್ಷಣ ಮಾಡಿಸಬೇಕು.ಕಡ್ನೀರಿನಲ್ಲಿ ಎಲ್ಲಾ ಭಾಗಕ್ಕೂ ಭೇಟಿ ನೀಡಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕಾಗಿದ್ದು,ಇದಕ್ಕೆ ಒಂದು ಪ್ರತ್ಯೇಕ ಮೊಬೈಲ್ ಟೀಂ ಮಾಡಲಾಗುವುದು.
ಟೀಂನಲ್ಲಿ ಲ್ಯಾಬ್ ಟೆಕ್ನಿಶಿಯನ್, ಮೆಡಿಕಲ್ ಆಫೀಸರ್ ಸೇರಿ ಮೂವರು ಸಿಬ್ಬಂದಿ ಇರುತ್ತಾರೆ.ಪ್ರತಿಯೊಬ್ಬರ ಪರೀಕ್ಷೆ ಮಾಡಿಸಿ ವರದಿ ನೀಡಬೇಕು. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.ಕಡ್ನೀರು ಭಾಗದ ಎಲ್ಲಾ ಜನರನ್ನೂ ಪರೀಕ್ಷೆಗೊಳ ಪಡಿಸಿ ಶೀಘ್ರವಾಗಿ ಮಾಹಿತಿ ನೀಡುವುದು ಹಾಗೂ ಎಲ್ಲಾ ಮನೆಗಳನ್ನೂ ಸ್ಕ್ರೀನ್ ಮಾಡುವಂತೆ ಕ್ರಮ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಆನಂದ,ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶಾಂತಿ ನಾಯ್ಕ, ಪ್ರಯೋಗಾಲಯ ತಂತ್ರಜ್ಞೆ ತಾರಾ,ಆಶಾ ಕಾರ್ಯಕರ್ತೆ ಶೈಲಾ ನಾಯ್ಕ ಇದ್ದರು.




