ಗುತ್ತಿಗೆದಾರನಿಂದ ಲಂಚ: ಜಿ.ಪಂ. ಇಂಜಿನಿಯರ್ ಸಹಿತ ಐವರು ಎಸಿಬಿ ಬಲೆಗೆ

ಕೊಡಗು : ಗುತ್ತಿದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಕೊಡಗು ಜಿಲ್ಲಾ ಪಂಚಾಯಿತಿಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಹಿತ ಐವರು ಶನಿವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ರಸ್ತೆ, ಮೋರಿ ಹಾಗೂ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಯ ಟೆಂಡರ್ ನೀಡಲು ಲಂಚ ಪಡೆಯುತ್ತಿ ಸಂದರ್ಭದಲ್ಲಿ ಇವರನ್ನು ಬಂದಿಸಲಾಗಿದೆ.
ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಯ್ಯ, ಸಹಾಯಕ ಎಂಜಿನಿಯರ್ ತೌಸಿಫ್, ಎಸ್ಡಿಎ ರಮೇಶ್, ಕವನ್ ಹಾಗೂ ಸಂತೋಷ್ ಎಂಬವರೇ ಎಸಿಬಿ ಬಲೆಗೆ ಬಿದ್ದವರು. ಆರೋಪಿಗಳಿಂದ ಒಟ್ಟು 4.10 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಎಸ್ಪಿ ಅರುಣಾಂಶು ಗಿರಿ ತಿಳಿಸಿದ್ದಾರೆ.
ಎಸಿಬಿ ಅಧಿಕಾರಿಗಳು ಕಚೇರಿಗೆ ದಾಳಿ ನಡೆಸುತ್ತಿದ್ದಂತೆ ಗುತ್ತಿಗೆದಾರರಿಂದ ಪಡೆದಿದ್ದ ಹಣವನ್ನು ಕಿಟಕಿಯ ಮೂಲಕ ಪಕ್ಕದ ಕಾಡಿಗೆ ಎಸೆಯಲಾಗಿದ್ದು, ಅದನ್ನು ಅಧಿಕಾರಿಗಳು ಹುಡುಕಿ ವಶ ಪಡಿಸಿಕೊಂಡರು. ಶ್ರೀಕಂಠಯ್ಯ ಅವರ ಮನೆಯ ಮೇಲೂ ದಾಳಿ ನಡೆದಿದೆ.
ಚೇರಂಬಾಣೆಯ ಗುತ್ತಿಗೆದಾರ ಬಡ್ಡೀರ ನಂದ ಎಂಬುವರು ಶ್ರೀಕಂಠಯ್ಯ ವಿರುದ್ಧ ದಾಖಲೆ ಸಹಿತ ದೂರು ನೀಡಿದ್ದರು.




