ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ನಮ್ಮ ಅನುಮತಿ ಯಾಕೆ?; ಅರುಣ್ ಸಿಂಗ್ ಪ್ರಶ್ನೆ

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯ ಪ್ರವಾಸ ಆರಂಭಿಸಲು ಗ್ರೀನ್ ಸಿಗ್ನಲ್ ಯಾಕೆ ನೀಡಬೇಕು. ಅವರು ಪಕ್ಷ ಮತ್ತಷ್ಟು ಬಲಿಷ್ಠಗೊಳಿಸಲು ಮುಂದಾದರೆ ಒಳ್ಳೆಯದು. ಕಾರ್ಯಕರ್ತರಲ್ಲಿ ಇದು ಮತ್ತಷ್ಟು ಹುಮ್ಮಸ್ಸು ತರಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಪಾದಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಹಿರಿಯ ನಾಯಕ. ಅವರು ಪ್ರವಾಸ ಮಾಡಬಹುದು. ಈಗಾಗಲೇ ಬಗ್ಗೆ ಹಲವಾರು ಬಾರಿ ಹೇಳಿರುವೆ ಎಂದು ಹೇಳಿದರು.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತ್ರತ್ವದಲ್ಲಿ ಒಳ್ಳೆಯ ಕೆಲ್ಸ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ, ಬಡವರಿಗೆ ಒಳ್ಳೆಯ ಕಾರ್ಯಕ್ರಮ ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಮುಂದೆಯೂ ಒಳ್ಳೆಯ ಕೆಲಸ ಮಾಡಲಿದ್ದಾರೆ. ಎಲ್ಲಾ ಸಮಾಜದ, ಎಲ್ಲಾ ಜನಾಂಗದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಜನರಿಗೆ ಅನುಕೂಲ ಆಗುವ ಕೆಲ್ಸಾ ಮಾಡುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂಬರುವ ಚುನಾವಣೆಗೆ ಹೋಗಲಾಗುವುದು. ಈ ಬಗ್ಗೆ ಪದೇ ಪದೇ ಹೇಳಲು ಆಗದು ಎಂದು ತಿಳಿಸಿದರು.
ಎರಡು ದಿನಗಳ ದಾವಣಗೆರೆ ಸಭೆಯಲ್ಲಿ ಪಕ್ಷದ ವಿಚಾರ ಚಿಂತನೆ ನಡೆಯಲಿದೆ. ಮುಂಬರುವ ಚುನಾವಣೆ ಎದುರಿಸಲು ಕಾರ್ಯತಂತ್ರ ರೂಪಿಸಲಾಗುವುದು ಎಂದು ತಿಳಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ದೇವಸ್ಥಾನದ ಬದಲು ಮಸೀದಿ ಬಗ್ಗೆ ಮಾತಾಡುತ್ತಾರೆ. ಕಾಂಗ್ರೆಸ್ ನಾಯಕರು ಈಗ ದೇವಸ್ಥಾನದ ಬಗ್ಗೆ ಮಾತಾಡುತ್ತಾರೆ. ಬಿಜೆಪಿ ದೇವಸ್ಥಾನ ನಿರ್ಮಿಸುತ್ತದೆ. ದೇವಸ್ಥಾನ ಉರುಳಿಸುವ ಕೆಲಸ ಮಾಡಲ್ಲ. ದೇವಸ್ಥಾನಗಳ ಬಗ್ಗೆ ಸಿದ್ದರಾಮಯ್ಯ ಅವರು ಈಗ ಮಾತಾಡುತ್ತಿದ್ದಾರೆ. ಅವರು ಮಸೀದಿಗಳ ಬಗ್ಗೆ ಹೆಚ್ಚು ಮಾತನಾಡಲಿ ಎಂದು ಸಿದ್ದರಾಮಯ್ಯ ಬಗ್ಗೆ ಅರುಣ್ ಸಿಂಗ್ ವ್ಯಂಗ್ಯವಾಡಿದರು.
