
ಬೆಂಗಳೂರು: ನೀರಾವರಿ ಯೋಜನೆಗಳ ಜಾರಿ ವಿಚಾರದಲ್ಲಿ ಯಾವುದೇ ಜಿಲ್ಲೆಗೆ ತಾರತಮ್ಯ ಮಾಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಗೆ ಇಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ಸಿನ ಈಶ್ವರ ಖಂಡ್ರೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅನುದಾನದ ಲಭ್ಯತೆ ನೋಡಿಕೊಂಡು ನೀರಾವರಿ ಯೋಜನೆಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು ಎಂದರು.
ಬೀದರ್ ಜಿಲ್ಲೆಯಲ್ಲಿ ನೀರಾವರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಸರ್ಕಾರದ ಉತ್ತರ ಸಮಾಧಾನ ತಂದಿಲ್ಲ. ಕಾಲ ವಿಳಂಬವಾಗುವುದರಿಂದ ಯೋಜನೆಗಳ ಮೊತ್ತ ಹೆಚ್ಚಾಗಿ ಯಾವುದೇ ಯೋಜನೆಗಳ ಲಾಭ ರೈತರಿಗೆ ಮುಟ್ಟುವುದಿಲ್ಲ ಎಂದು ತಿಳಿಸಿದರು.
ಇದೇ ವಿಚಾರವಾಗಿ ಬೀದರ್ ಜಿಲ್ಲೆಯ ಬಂಡಪ್ಪ ಕಾಶಂಪೂರ್ ಮತ್ತು ಶರಣು ಸಲಗಾರ್ ಮಾತನಾಡಿ, ಕೆರೆ ತುಂಬಿಸುವ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಕಳೆದ ಬಜೆಟ್ ನಲ್ಲಿ ಕೆರೆ ತುಂಬಿಸುವ ಯೋಜನೆಗೆ 75 ಕೋಟಿ ರೂಪಾಯಿ ಮೀಸಲಾಗಿತ್ತು. ಅದನ್ನು ಪೂರ್ಣ ಬಳಕೆ ಮಾಡಬೇಕು ಬೇರೆ ಕಡೆ ವಿನಿಯೋಗಿಸಬಾರದು ಎಂದು ಒತ್ತಾಯಿಸಿದರು.




