ಚುನಾವಣೆ ಆಯೋಗವು ಬಿಜೆಪಿ ಸರ್ಕಾರದ ಕೈಗೊಂಬೆಯಾಗಿದೆ: ಗುರುರಾಜ್ ಹುಣಸಿಮರದ

ಧಾರವಾಡ: ಬಿಜೆಪಿಯವರು ಹುಬ್ಬಳ್ಳಿ ಧಾರವಾಡ ನಗರದ ಜನರಿಗೆ ಸುಳ್ಳು ಹೇಳುವುದರ ಮೂಲಕ ಮೋಸ ಮಾಡುತ್ತಿದ್ದಾರೆ. ಅವಳಿನಗರಕ್ಕೆ ಬಿಜೆಪಿ ದೊಡ್ಡ ಮಟ್ಟದ ಯಾವ ಯೋಜನೆಯನ್ನು ತಂದಿಲ್ಲ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯವರು ಹಣ ಹೊಳೆ ಹರಿಸುವುದರ ಮೂಲಕ ಹೆಚ್ಚಿನ ಸ್ಥಾನಗಳನ್ಮು ಪಡೆದುಕೊಂಡಿದ್ದಾರೆ. ಅಲ್ಲದೆ ಚುನಾವಣೆ ಆಯೋಗವು ಕೂಡಾ ಬಿಜೆಪಿ ಸರ್ಕಾರಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಹು-ಧಾ ಮಹಾನಗರ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ್ ಹುಣಸಿಮರದ ಗಂಭೀರ ಆರೋಪ ಮಾಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಪ್ರಾಮಾಣಿಕತೆ ಅನ್ನುವುದು ಇಲ್ಲ. ಪ್ರತಿ ಚುನಾವಣೆಗಳಲ್ಲಿ ತನ್ನ ಮೋಸದ ಆಟವನ್ನು ಮುಂದುವರೆಸುತ್ತಲ್ಲೇ ಬಂದಿದೆ, ಅದನ್ನು ಪಾಲಿಕೆ ಚುನಾವಣೆಲ್ಲಿಯು ಕೂಡಾ ಮಾಡಿದೆ. ವಿವಿ ಪ್ಯಾಡ್ ಬಳಸದೇ ಪಾಲಿಕೆ ಚುನಾವಣೆ ನಡೆಸಲಾಗಿದೆ, ಇದು ಬಿಜೆಪಿಗೆ ಸಹಕಾರಿಯಾಗಿದೆ. ವಿವಿಪ್ಯಾಡ್ ಬಳಸಿ ಪಾಲಿಕೆ ಚುನಾವಣೆ ಮಾಡಿದಲ್ಲಿ ಬಿಜೆಪಿಯವರು ಸ್ಥಾನ ಕಡಿಮೆಯಾಗುತ್ತಿದ್ದವು. ಅದನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಇವಿಎಂ ಮಷನ್ಗಳನ್ನು ಬಳಸಿ ಚುನಾವಣೆಗೆ ನಡೆಸಲು ಬೇರೆಬೇರೆ ಮಾರ್ಗಗಗಳ ಮೂಲಕ ಒತ್ತಡ ಹಾಕಿ ಚುನಾವಣೆ ನಡೆಸಲಾಗಿದೆ ಎಂದು ಆರೋಪಿಸಿದರು.
ಪಾಲಿಕೆ ಚುನಾವಣೆಯಲ್ಲಿ 48 ಜನ ಸ್ಪರ್ಧೆ ಮಾಡಿದ್ದರು:
ಪ್ರಸ್ತುತ 2020-21 ನೇ ಪಾಲಿಕೆಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಒಟ್ಟು 48 ಜನ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಲಾಗಿತ್ತು. ಅದರಲ್ಲಿ 10ರಿಂದ 12 ಜನ ಅಭ್ಯರ್ಥಿಗಳು ಗೆದ್ದು ಬರುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಒಬ್ಬರು ಅಭ್ಯರ್ಥಿ ಮಾತ್ರ ಗೆದ್ದು ಬಂದಿದ್ದಾರೆ. ಇದಕ್ಕೆ ಪ್ರಮುಖವಾಗಿ ನಮ್ಮ ಪಕ್ಷ ಸಂಘಟನೆ ಇಲ್ಲದಿರುವುದು ಪಾಲಿಕೆ ಫಲಿತಾಂಶದಲ್ಲಿ ಹಿನ್ನಡೆಯಾಗಿದೆ. ಇದನ್ನು ನಾವು ಒಪ್ಪಿಕೊಂಡು ಮುಂಬರುವ ಚುನಾವಣೆಗಳು ಬರುವವರೆಗೂ ಪಕ್ಷವನ್ನು ಬಲಪಡಿಸು ಕೆಲಸ ಮಾಡುತ್ತೇವೆ, ಬೂತ ಮಟ್ಟದಿಂದ ಪಕ್ಷ ಸಂಘಟನೆಯೊಂದಿಗೆ ಮುಂಬರುವ ಚುನಾವಣೆಗಳನ್ನು ಎದುರಿಸುತ್ತೆವೆ ಎಂದು ತಿಳಿಸಿದರು.
ಶ್ರೀಕಾಂತ ಜಮನಾಳ ಪಕ್ಷದಲ್ಲಿ ಕಾಣಿಸಿಕೊಂಡಿಲ್ಲ
ಜೆಡಿಎಸ್ ಪಕ್ಷದ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ ಅವರ ಮಹಿಳೆಯೊಂದಿಗಿನ ಅಸಭ್ಯ ವರ್ತನೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಳೆದ ಎಂಎಲ್ಎ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರು. ಆದರೆ ಚುನಾವಣೆಯಲ್ಲಿ ಸೋತ ಬಳಿಕ ಅವರು ಎಲ್ಲಿಯು ಜೆಡಿಎಸ್ ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಈಗ ಅವರ ಅಸಭ್ಯ ವರ್ತನೆಯ ಸುದ್ದಿಯಲ್ಲಿ ಜೆಡಿಎಸ್ ಅಂತಾ ಸುದ್ದಿಗಳು ಬರುತ್ತಿವೆ. ಇದರ ಕುರಿತು ನಮ್ಮ ರಾಜ್ಯಾಧ್ಯಕ್ಷರ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಅವರನ್ನು ಕೈಬೀಡುವುದು ಅಥವಾ ಹಾಗೇ ಮುಂದುವರೆಸುವುದರ ಕುರಿತು ಚರ್ಚೆ ನಡೆಸಿ ತೀರ್ಮಾಣ ಕೈಗೊಳ್ಳಲಾಗುವುದು ಎಂದರು.




