ಕಲಬುರ್ಗಿ ಮಹಾನಗರ ಪಾಲಿಕೆ – ಜೆಡಿಎಸ್ ಸದಸ್ಯರು ಬಿಜೆಪಿಗೆ ಬೆಂಬಲಿಸುವ ವಿಶ್ವಾಸ: ಸಚಿವ ಮುರುಗೇಶ್ ನಿರಾಣಿ

ಬಾಗಲಕೋಟೆ: ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಪಕ್ಷದ 4 ಸದಸ್ಯರು ನಮಗೆ ಬೆಂಬಲ ನೀಡುವ ವಿಶ್ವಾಸ ಇದೆ. ಮೇಯರ್ ಸ್ಥಾನ ಬೇರೆಯವರಿಗೆ ಕೊಡುವ ಪ್ರಶ್ನೆ ಇರುವುದಿಲ್ಲ ಎಂದು ಕಲಬುರ್ಗಿ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಬೂದಿಹಾಳ ಗ್ರಾಮದಲ್ಲಿ ಮಾತನಾಡಿದ ಅವರು, ಕಲಬುರ್ಗಿ ಮಹಾನಗರ ಪಾಲಿಕೆ 70 ವರ್ಷಗಳ ಇತಿಹಾಸದಲ್ಲಿ 23 ಸ್ಥಾನವನ್ನು ಮೊಟ್ಟಮೊದಲ ಬಾರಿಗೆ ಬಿಜೆಪಿ ಪಕ್ಷ ಜಯಸಾಧಿಸಿದೆ. ಜೆಡಿಎಸ್ ಸದಸ್ಯರನ್ನು ಬೆಂಬಲಿಸುವ ವಿಚಾರದಲ್ಲಿ ನನಗೆ ಜವಾಬ್ದಾರಿ ಕೊಟ್ಟಿಲ್ಲ ಎಂದರು.
ಮುಂದಿನ ಚುನಾವಣೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಅಮಿತ್ ಶಾ ಹೇಳಿಕೆಯಿಂದ ಬಿಎಸ್ವೈ ಸೈಡ್ ಲೈನ್ ಮಾಡಲಾಗುತ್ತಿದೆಯಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರ ಅವರು ಸಮರ್ಥ ರಾಜಕಾರಣಿ ಏರಿಳಿತ ಅನುಭವ ಹೊಂದಿದ ರಾಜಕಾರಣಿ ಮತ್ತು ಮಾಜಿ ಸಿಎಂ ಯಡಿಯೂರಪ್ಪನವರ ಗರಡಿ ಮನೆಯಲ್ಲಿ ನೀರಾವರಿ ಸಚಿವರಾಗಿ ಅನುಭವ ಹೊಂದಿದವರು. ಸೆ.13 ರಿಂದ ಅಧಿವೇಶನ ಪ್ರಾರಂಭವಾಗುತ್ತಿದ್ದು ಅಧಿವೇಶನದಲ್ಲಿ ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂದು ತಿಳಿಸಿದರು.
ಇನ್ನೂ 2 ವಿಧಾನಸಭೆ ಉಪ ಚುನಾವಣೆ ಇದ್ದು ಅವುಗಳನ್ನು ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
