ಬಗೆಬಗೆ ಗಣಪ ಮೂರ್ತಿ ತಯಾರಿಸಿ ನೆರೆಹೊರೆಯವರಿಗೆ ನೀಡಿದ ಮಕ್ಕಳು

ದಾವಣಗೆರೆ: ಎಲ್ಲೆಡೆ ಗೌರಿಗಣೇಶ ಹಬ್ಬ ಸಂಭ್ರಮ ಮನೆ ಮಾಡಿದೆ. ಗಣೇಶೋತ್ಸವ ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಆದ್ರೆ ದಾವಣಗೆರೆಯಲ್ಲಿ ವಿದ್ಯಾರ್ಥಿನಿಯರು ವಿಶಿಷ್ಟ ಅಭಿಯಾನ ಕೈಗೊಂಡಿದ್ದಾರೆ.
ಪರಿಸರ ಸ್ನೇಹಿ ಗಣೇಶನನ್ನು ಕೂರಿಸಲು ವಿಭಿನ್ನ ರೀತಿಯಲ್ಲಿ ದಾವಣಗೆರೆಯ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ನಗರದ ಸಿದ್ದಗಂಗಾ ಶಾಲೆಯ ಮಕ್ಕಳು ಸೇರಿದಂತೆ ಜಿಲ್ಲೆಯಾದ್ಯಂತ ಸಾವಿರಾರು ವಿದ್ಯಾರ್ಥಿಗಳು ವಿವಿಧ ರೀತಿಯ ಪರಿಸರ ಸ್ನೇಹಿ ಗಣೇಶ ತಯಾರಿಸಿದ್ದು, ಅರಿಶಿಣ ಗಣಪತಿ, ಜೆಡಿ ಮಣ್ಣಿನ ಗಣಪ, ಎಲೆಯಲ್ಲಿ, ಸೋಪ್ ನಲ್ಲಿಯೂ ಸಹ ವಿದ್ಯಾರ್ಥಿಗಳ ಕುಂಚದಲ್ಲಿ ತರೇಹವಾರಿ ಗಣೇಶ ಮೂರ್ತಿಗಳು ಅರಳಿವೆ. ಪಿಓಪಿ, ಪೇಂಟಿಂಗ್ ಗಣೇಶ ನೀರಿನಲ್ಲಿ ವಿಸರ್ಜಿಸುವುದರಿಂದ ಜಲಚರ ಪ್ರಾಣಿಗಳಿಗೆ ಹಾನಿಯಾಗುತ್ತದೆ. ನೀರು ಕಲುಷಿತಗೊಳ್ಳುವ ದೃಷ್ಟಿಯಿಂದ ಪರಿಸರ ಸ್ನೇಹಿ ಗಣೇಶನನ್ನ ತಯಾರಿಸುತ್ತಿರುವ ಮಕ್ಕಳು ಅಕ್ಕಪಕ್ಕದ ಮನೆಯವರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಇದುವರೆಗೆ ಒಂದೂವರೆ ಸಾವಿರ ಗಣಪನ ಮೂರ್ತಿಗಳನ್ನು ವಿದ್ಯಾರ್ಥಿಗಳು ರೂಪಿಸಿದ್ದಾರೆ.

ನೀರಿನಲ್ಲಿ ಬೇಗ ಕರಗುವ ಗಣೇಶ ಮಾಡಿ ಅಕ್ಕ, ಪಕ್ಕದ ಮನೆಗಳಿಗೆ ನೀಡಿ ವಿದ್ಯಾರ್ಥಿಗಳಿಂದ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಸ್ಕೌಟ್ ಅಂಡ್ ಗೈಡ್ಸ್ ಮಕ್ಕಳಿಂದ ಈ ಪ್ರಯತ್ನ ನಡೆಯುತ್ತಿದೆ. ಕಳೆದ 2 ವರ್ಷಗಳಿಂದ ಪರಿಸರ ಸ್ನೇಹಿ ಗಣೇಶನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಕ್ಕಳ ಈ ಅಭಿಯಾನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮನೆಯಲ್ಲಿ ಗಣೇಶ ತಯಾರಿ ಮಾಡಿ ಪೂಜೆ ನಂತರ ಅದನ್ನು ನೀರಿನಲ್ಲಿ ಕರಗಿಸಿ ಅದಕ್ಕೆ ಸಸಿ ನೆಟ್ಟು ಬೆಳೆಸುವಂತೆಯೂ ಮನವಿ ಮಾಡುತ್ತಿರುವ ಮಕ್ಕಳ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸೋಣ, ಮಾಲಿನ್ಯ ತಡೆಯೋಣ ಎನ್ನುವ ಸಂದೇಶ ಸಾರುತ್ತಿದ್ದಾರೆ.




