ಇಂಧನ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ದೇಶದಲ್ಲಿ ಇಂಧನ ದರ ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಯುವ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದ ಬಳಿ ಖಾಲಿ ಸಿಲಿಂಡರ್ ಮತ್ತು ಸೌದೆ ಒಲೆ ಇಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಜಿಲ್ಲಾ ಘಟಕದ ಅಧ್ಯಕ್ಷ ಕೆ ಪಿ ಅಂಶುಮಂತ್ ಮಾತನಾಡಿ, ಕಳೆದ 2014ರ ಕಾಂಗ್ರೆಸ್ ಅವಧಿಯಲ್ಲಿದ್ದ ಪೆಟ್ರೋಲ್, ಡಿಸೇಲ್ ದರಕ್ಕೂ ಇಂದಿನ ದರಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ತಪ್ಪು, ಆರ್ಥಿಕ ನೀತಿಗಳಿಂದ ದೇಶದ ಜಿಡಿಪಿ ಮೌಲ್ಯ ಕುಸಿತಗೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆಯಿಂದ ದೇಶದ ಜನ ತತ್ತರಿಸಿದ್ದಾರೆ. ಈ ಬಗ್ಗೆ ಶಾಸಕ ಸಿ ಟಿ ರವಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಕಾರವೆತ್ತುತ್ತಿಲ್ಲ. ದೇಶದಲ್ಲಿ ದುರಾಡಳಿತದ ಅಚ್ಛೇದಿನ್ ಶುರುವಾಗಿದೆ ಎಂದರು.
ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿ ಎನ್ ಅಕ್ಮಲ್, ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಡಿ ಎಲ್ ವಿಜಯ್ ಕುಮಾರ್, ರವೀಶ್ ಕ್ಯಾತನಬೀಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಮಾತನಾಡಿದರು.




