ಮಹಿಳೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಿ: ನ್ಯಾಷನಲ್ ವಿಮೆನ್ಸ್ ಫ್ರಂಟ್ ಪ್ರತಿಭಟನೆ

ಉಡುಪಿ: ಮಹಿಳೆ ಮತ್ತು ಹೆಣ್ಣು ಮಕ್ಕಳ ಪಾಲಿಗೆ ರಾಜ್ಯವು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಹಾಗೂ ಅಸುರಕ್ಷಿತ ತಾಣವಾಗಿ ಬದಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ಅತ್ಯಾಚಾರಿಗಳು ರಾಜಾರೋಷವಾಗಿ, ಎಗ್ಗಿಲ್ಲದೆ ಲೈಂಗಿಕ ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರನ್ನು ಬೆಂಬಲಿಸುವಂತಹ ಭ್ರಷ್ಟಾಚಾರಿ ರಾಜಕೀಯ ಪುಡಾರಿಗಳಿಂದ ನಮ್ಮ ಕಾನೂನುಗಳು ದುರ್ಬಲಗೊಂಡಿರುವುದು. ಅಲ್ಲದೆ ಕಾನೂನು ರಕ್ಷಿಸುವ ಪೊಲೀಸರು ಕೈಗೊಂಬೆಗಳಾಗಿದ್ದಾರೆ. ಇದರಿಂದ ಸಂತ್ರಸ್ತರಿಗೆ ನ್ಯಾಯವು ಮರೀಚಿಕೆಯಾಗಿದೆ ಎಂದು ನ್ಯಾಷನಲ್ ವಿಮೆನ್ಸ್ ಫಂಟ್ ಆರೋಪಿಸಿದೆ.
ಗುರುವಾರ ಉಡುಪಿಯ ಹುತಾತ್ಮ ಸೈನಿಕರ ಸ್ಮಾರಕದ ಎದುರು ಉಡುಪಿ ಜಿಲ್ಲಾ ನ್ಯಾಷನಲ್ ವುಮೆನ್ಸ್ ಫ್ರಂಟ್ ಕಾರ್ಯಕರ್ತೆಯರು ಪ್ರತಿಭಟನೆ ಹಮ್ಮಿಕೊಂಡಿದ್ದರು.
ಕರ್ನಾಟಕದ ಮೈಸೂರಿನಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರವು ಇದಕ್ಕೆ ಒಂದು ಜ್ವಲಂತ ಉದಾಹರಣೆಯಾಗಿದೆ. ಅಷ್ಟೇ ಅಲ್ಲದೆ ರಾಜಕೀಯ ಅಥವಾ ಕೋಮುದ್ವೇಷದ ಹೆಸರಿನಲ್ಲಿ ಒಂದು ಸಮುದಾಯದ ಮಹಿಳೆಯರನ್ನು ಹೀನಾಯ ಪದಗಳಿಂದ ಅವಮಾನಿಸಲಾಗುತ್ತಿದೆ. ಅತ್ಯಾಚಾರಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ಕಠಿಣ ಕಾನೂನುಕ್ರಮಗಳನ್ನು ಜರುಗಿಸಬೇಕು. ಸಂತ್ರಸ್ತೆಯ ಪರವಾಗಿ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸುಗಳನ್ನು ದಾಖಲಿಸುವುದು ಹಾಗೂ ಸಂತ್ರಸ್ತೆಗೆ ಝಡ್ ಪ್ಲಸ್ ಮಾದರಿಯ ಸಂಪೂರ್ಣ ಸುರಕ್ಷತೆಯನ್ನು ಒದಗಿಸಬೇಕು, ಇದಕ್ಕೆ ಸಂಬಂಧಪಟ್ಟ ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ರಾಜಕೀಯ ಪ್ರೇರಿತ ಅಥವಾ ಸಂಘಟನಾ ಪ್ರೇರಿತ ಯಾವುದೇ ವ್ಯಕ್ತಿಯ ಶಿಫಾರಸನ್ನು ಮಾನ್ಯ ಮಾಡದಿರುವುದು ಇತ್ಯಾದಿ ಬೇಡಿಕೆಗಳನ್ನು ನ್ಯಾಷನಲ್ ವಿಮೆನ್ಸ್ ಫ್ರೆಂಟ್ ಮನವಿ ರೂಪದಲ್ಲಿ ತಹಶೀಲ್ದಾರ್ ಗೆ ಸಲ್ಲಿಸಿತು.




