ಬೆಲೆಯೇರಿಕೆ ಯಲ್ಲಿ ಪ್ರಧಾನಿ ಮೋದಿ ಮೌನಿ ಬಾಬಾ ಆಗಿದ್ದಾರೆ: ಮಾಜಿ ಶಾಸಕ ಎಸ್ ಜಿ ನಂಜಯ್ಯನಮಠ

ಬಾಗಲಕೋಟೆ: ಪೆಟ್ರೋಲ್, ಎಲ್ ಪಿಜಿ ಸಿಲಿಂಡರ್ ದರ ಏರಿಕೆಯಿಂದ ಬಡವರಿಗೆ ಹೊರೆಯಾಗಿದೆ. ಬಡವರು ಕೈಚೀಲ ತುಂಬಾ ಹಣ ತೆಗೆದುಕೊಂಡು ಹೋಗಿ ಹಿಡಿ ತುಂಬಾ ಧಾನ್ಯ ತರುವಂತಹ ಪರಿಸ್ಥಿತಿಯಿದೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡದೇ ಮೌನಿ ಬಾಬಾ ಆಗಿದ್ದಾರೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್ ಜಿ ನಂಜಯ್ಯನಮಠ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದೇಶ ಕಾ ವಿಕಾಸ್ ಸಾಹುಕಾರ ಕೆ ಸಾಥ್ ಆಗಿದೆ. ತಮ್ಮ ಸರ್ಕಾರದ ವಿರುದ್ಧ ಜನಪರವಾಗಿ ಬಿಜೆಪಿಯವರು ಬಾಯಿ ತಗೆದರು. ಮೋದಿಯವರಿಗೆ ಎಚ್ಚರಿಕೆ ಕೊಟ್ಟರು ಎಂದು ನಿಮಗೆ ಮರ್ಯಾದೆ ಬರುತ್ತದೆ. ಜನರಿಗೆ ಉಪಕಾರ ಮಾಡುವುದು ರಾಜಕೀಯ ಸಿದ್ಧಾಂತ. ಇನ್ನೂ ಎಷ್ಟು ಏರಿಕೆ ಆಗುತ್ತೋ ಗೊತ್ತಿಲ್ಲ ಜೀವನವಂತೂ ತತ್ತರಿಸಿ ಹೋಗಿದೆ ಎಂದರು.
ಜನಪರ ಕಾಳಜಿಯೇ ಈ ಸರ್ಕಾರದಲ್ಲಿ ಇಲ್ಲ. ನಾನು ಬೊಮ್ಮಾಯಿ ಸರ್ಕಾರದ ಬಗ್ಗೆ ಮಾತನಾಡುವುದಿಲ್ಲ. ಬೊಮ್ಮಾಯಿ ಸರ್ಕಾರ ಈಗ ಬಂದಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಎಂಎಲ್ಸಿ ಹೆಚ್ ವಿಶ್ವನಾಥ್, ಶಾಸಕ ಯೋಗೇಶ್ವರ್ ದಿನನಿತ್ಯ ಟೀಕಾ ಪ್ರಹಾರ ಇಲ್ಲ ಎನ್ನುವುದು ಒಂದು ಸಮಾಧಾನ ಸಂಗತಿ. ಬೆಲೆಯೇರಿಕೆಯಿಂದ ಬಿಜೆಪಿ ವಿರುದ್ಧ ಜನ ಶಾಪ ಹಾಕುತ್ತಾರೆ. ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿಗರೇ ದನಿ ಎತ್ತಲಿ ಎಂದು ಸಲಹೆ ನೀಡಿದರು.
