ಮೂತ್ರ ಕುಡಿಸಿದ ಪ್ರಕರಣ; ಪಿಎಸ್ಐ ಅರ್ಜುನ್ ಬಂಧನ

ಚಿಕ್ಕಮಗಳೂರು: ಗೋಣಿಬೀಡು ಠಾಣೆಯಲ್ಲಿ ದಲಿತ ಯುವಕನಿಗೆ ಇತ್ತೀಚೆಗೆ ಮೂತ್ರ ಕುಡಿಸಿದ ಆರೋಪದ ಪ್ರಕರಣದಲ್ಲಿ ಪಿಎಸೈ ಅರ್ಜುನ್ ಅವರನ್ನು ಬಂಧಿಸಿ ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಕಿರುಗುಂದ ಗ್ರಾಮದ ಪುನೀತ್ ಎಂಬ ಯುವಕನನ್ನು ಠಾಣೆಗೆ ಕರೆತಂದು ಥಳಿಸಿ, ಜಾತಿನಿಂದನೆ ಮಾಡಿ, ಬಲಾತ್ಕಾರವಾಗಿ ಮೂತ್ರ ಕುಡಿಸಿದ ಆರೋಪ ಪಿಎಸೈ ಅರ್ಜುನ್ ಮೇಲಿತ್ತು. ಪ್ರಕರಣವನ್ನು ಖಂಡಿಸಿ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿ, ಒತ್ತಡ ತಂದಾಗ ಆರೋಪಿಯಾದ ಪಿಎಸೈ ಅರ್ಜುನ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.
ಆದರೆ ಸಂಘಟನೆಗಳು ತೀವ್ರ ಒತ್ತಡ ಹಾಕಿದ್ದರಿಂದ ಪಿಎಸೈಯನ್ನು ಅಮಾನತು ಮಾಡಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸೆಷನ್ಸ್ ನ್ಯಾಯಾಲಯ ಹಾಗೂ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಅವರನ್ನು ಬಂಧಿಸಿರಲಿಲ್ಲ. ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಆರೋಪಿಯನ್ನು ಬಂಧಿಸದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಪ್ರಗತಿಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.
ಇಷ್ಟೆಲ್ಲಾ ಬೆಳವಣಿಗೆ ನಂತರ ಬೆಂಗಳೂರಲ್ಲಿ ಆರೋಪಿಯನ್ನು ಬಂಧಿಸಿ ಸಿಐಡಿಗೆ ಒಪ್ಪಿಸಲಾಗಿದೆ. ಆರೋಪಿ ಅರ್ಜುನ್ ಸ್ವತಃ ತಾವೇ ಸಿಐಡಿ ಪೊಲೀಸರಿಗೆ ಶರಣಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.
14 ದಿನಗಳ ನ್ಯಾಯಾಂಗ ಬಂಧನ
ಆರೋಪಿ ಪಿಎಸ್ಐ ಅರ್ಜುನ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚಿಕ್ಕಮಗಳೂರು ಪ್ರಥಮ ಸತ್ರ ನ್ಯಾಯಾಲಯ ಈ ಆದೇಶ ನೀಡಿದೆ. ಗೋಣಿಬೀಡು ಠಾಣಾಧಿಕಾರಿಯಾಗಿದ್ದ ಅರ್ಜುನ್ ಕಳೆದ ಮೇ 10ರಂದು ಪುನೀತ್ ಮೇಲೆ ಹಲ್ಲೆ ನಡೆಸಿ, ಮೂತ್ರ ಕುಡಿಸಿರುವ ಆರೋಪ ಅರ್ಜುನ್ ಮೇಲಿದ್ದು, ಕೆಲಸದಿಂದ ಅಮಾನತುಗೊಂಡಿದ್ದರು. ನಿರೀಕ್ಷಣಾ ಜಾಮೀನು ಅರ್ಜಿಯೂ ತಿರಸ್ಕೃತವಾಗಿತ್ತು. ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು.
