ಬಿಜೆಪಿಗೆ ಮತಹಾಕಬೇಡಿ: ಬಿಜೆಪಿ ಉಪಾಧ್ಯಕ್ಷರಿಂದಲೇ ಮನವಿ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಂದ ಮತದಾರರ ಮನ ಗೆಲ್ಲಲು ಕೊನೆಯ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ. ಆದರೆ, ರಾಷ್ಟ್ರೀಯ ಪಕ್ಷದ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರು ಸ್ವತಃ ತಮ್ಮ ಪಕ್ಷಕ್ಕೆ ಮತ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದು ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗಿದೆ.
ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಹಾಕಬಾರದು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಡಾ.ರಾಘವೇಂದ್ರ ಚಿಂಚನಸೂರ ಅವರು ಹೇಳಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಕಲಬುರಗಿಯಿಂದ ತೆರಳಿದ ಕಾರ್ಯಕರ್ತರಿಗೆ ಬೆಂಗಳೂರಿನ ಬಿಜೆಪಿ ಪಕ್ಷದ ಕಚೇರಿಯ ಒಳಗೆ ಹೋಗಲು ಅವಕಾಶ ನೀಡುವದಿಲ್ಲ, ಏಕೆ ಎಂದು ಪ್ರಶ್ನಿಸಿದರೆ ಕೊರೊನ ಹೆಸರು ಹೇಳಿ ಹೊರ ಕಳುಹಿಸುತ್ತಿದ್ದಾರೆ. ಅದೇ ದೊಡ್ಡ ದೊಡ್ಡ ಮುಖಂಡರಿಗೆ ಬಿಡುತ್ತಿದ್ದಾರೆ. ಹಾಗಾದರೆ ಸಾಮಾನ್ಯ ಕಾರ್ಯರ್ತರ ಗತಿಯೇನೆಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಬೆಲೆ ನೀಡುತ್ತಿಲ್ಲ. ಬಿಜೆಪಿಯವರಿಗೆ ಅಧಿಕಾರದ ಮದ ಜಾಸ್ತಿಯಾಗಿದೆ. ಮೇಲಾಗಿ ಕಲ್ಯಾಣ ಕರ್ನಾಟಕದವರು ಅಂದರೆ ಕಿಮ್ಮತ್ತೆ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ಭಾಗದ ಅಭಿವೃದ್ದಿಗೆ ಒತ್ತು ನೀಡ್ತಿಲ್ಲ, ಸಚಿವ ಸ್ಥಾನ ಕೊಟ್ಟಿಲ್ಲ ಎಂದು ಗುಡುಗಿದ್ದಾರೆ. ಆದ್ದರಿಂದ ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸ ಬೇಡಿ ಬದಲಿಗೆ ನೋಟಾಗೆ ಚಲಾಯಿಸಿ ಎಂದುಮನವಿ ಮಾಡಿದ್ದಾರೆ.
