ಕಾಂಗ್ರೆಸ್ನಲ್ಲೂ ಮೂಲ-ವಲಸಿಗರ ಭಿನ್ನಮತ: ಹೈಕಮಾಂಡ್ಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಧು ಎಚ್ಚರಿಕೆ

ಚಂಡೀಗಢ: ಪಂಜಾಬ್ ಚುನಾವಣೆಯ ಹೊಸ್ತಿನಲ್ಲಿದೆ. ಕಳೆದ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ವಯಂ ವರ್ಚಸ್ಸಿನಿಂದ ಕೈಪಾಳಯಕ್ಕೆ ಅಭೂತಪೂರ್ವ ಜಯ ತಂದು ಕಂಡ ಕ್ಯಾ. ಅಮರೀಂದರ್ ಸಿಂಗ್ ವಿರುದ್ಧ ವಲಸೆ ಕಾಂಗ್ರೆಸ್ಸಿಗ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕತ್ತಿ ಮಸೆಯುತ್ತಿದ್ದಾರೆ. ಅವರನ್ನು ಸಮಾಧಾನ ಪಡಿಸುವ ಸಲುವಾಗಿ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿ, 10 ಸದಸ್ಯರ ಸಂಚಾಲನ ಸಮಿತಿಯನ್ನೂ ರಚಿಸಿತ್ತು. ಆದರೆ ಅದರಿಂದ ಸಿಧು ತೃಪ್ತರಾಗಿಲ್ಲ.
ಮುಂದಿನ ಚುನಾವಣೆಯಲ್ಲಿ ಕ್ಯಾಪ್ಟನ್ ನೇತೃತ್ವದಲ್ಲೇ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಎದುರಿಸಲಾಗುವುದು ಎಂದು ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಕಳೆದ ವಾರ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕೆರಳಿರುವ ಸಿಧು, ತಮಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಿ. ಇಲ್ಲವಾದರೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಹೈಕಮಾಂಡ್ ಗೆ ಬೆದರಿಕೆ ಹಾಕಿದ್ದಾರೆ.
ಸಿಧು ಪಾಳಯದಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಪ್ಯಾರೇಲಾಲ್ ಗರ್ಗ್ ಮತ್ತು ಮಲ್ವಿಂದರ್ ಸಿಂಗ್ ಅವರನ್ನು ವಜಾಗೊಳಿಸುವಂತೆ ರಾವತ್ ಆಗ್ರಹಿಸಿದ್ದರು. ಅಫ್ಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸಿದ ಬಳಿಕ, ಕಾಶ್ಮಿರ ಮತ್ತು ಪಾಕಿಸ್ತಾನದ ಕುರಿತ ಅವರ ವಿವಾದಾತ್ಮಕ ಹೇಳಿಕಯ ಹಿನ್ನೆಲೆಯಲ್ಲಿ ಅವರು ಈ ಒತ್ತಾಯ ಮಾಡಿದ್ದರು. ಆದರೆ ಈ ಬಗ್ಗೆ ಸಿಧು ಏನೂ ಕ್ರಮ ಕೈಗೊಂಡಿಲ್ಲ.
ಅಮೃತಸರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಿಧು, ಇನ್ನೂ ಇಪ್ಪತ್ತು ವರ್ಷ ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರಬೇಕೆಂದರೆ ನಾನು ಹೇಳುವ ಪಂಜಾಬ್ ಮಾದರಿಯನ್ನು ಅನುಸರಿಸಬೇಕು. ಅದಕ್ಕಾಗಿ ಪೂರ್ಣ ಸ್ವಾತಂತ್ರ್ಯ ನೀಡಬೇಕು. ಇಲ್ಲವಾದರೆ ನನ್ನ ದಾರಿ ನನಗೆ ಎಂದಿದ್ದಾರೆ. ಕೇವಲ ಶೋ ಪೀಸ್ ಆಗಿರಲು ನಾನು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪಂಜಾಬ್ ಕಾಂಗ್ರೆಸ್ ರಾಜಕೀಯದಲ್ಲಿ ಮತ್ತೆ ಅಸಮಾಧಾನ ಭುಗಿಲೆದ್ದಿದೆ.
ಇನ್ನೊಂದೆಡೆ, ಕಾಂಗ್ರೆಸೆ ಹಿರಿಯ ನಾಯಕ ಟಿ. ಎಸ್. ಸಿಂಗ್ ಮತ್ತು ಮುಖ್ಯಮಂತ್ರಿ ಭೂಪೇಶ್ ಬಘೇಲ್ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ತಮ್ಮ ಅಧಿಕಾರವಾಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಖುದ್ಧು ಪರಿಶೀಲನೆ ನಡೆಸಲು ರಾಜ್ಯಕ್ಕೆ ಆಗಮಿಸುವಂತೆ ಬಘೇಲ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಆಹ್ವಾನ ನೀಡಿದ್ದಾರೆ.




