ಕೋವಿಡ್ ನಿಯಮ ಉಲ್ಲಂಘಿಸಿ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಸೈಕಲ್ ಜಾಥಾ

ಬಾಗಲಕೋಟೆ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಬೃಹತ್ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಸೈಕಲ್ ಜಾಥಾ ವೇಳೆ ಕಾರ್ಯಕರ್ತರು ಕೋವಿಡ್ ನಿಯಮ ಪಾಲಿಸದೇ ಇರೋದು ಕಂಡುಬಂದಿದೆ.
ಬಾಗಲಕೋಟೆ ನಗರದ ಬೀಳೂರ ಅಜ್ಜನ ದೇವಸ್ಥಾನದ ಬಳಿ ಯುವ ಸಂಕಲ್ಪ ಯಾತ್ರೆಯ ಬೃಹತ್ ಸೈಕಲ್ ಜಾಥಾಕ್ಕೆ ಶಾಸಕ ವೀರಣ್ಣ ಚರಂತಿಮಠ ಬಿಜೆಪಿ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರು ಬಹುತೇಕರು ಮಾಸ್ಕ್ ಹಾಕಿಕೊಳ್ಳದೇ ಗುಂಪು ಗುಂಪಾಗಿ ಸೈಕಲ್ ಏರಿ ಜಾಥಾಗೆ ಹೊರಟರು. ಚಾಲನೆ ವೇಳೆ ಶಾಸಕ ವೀರಣ್ಣ ಚರಂತಿಮಠ ಮಾಸ್ಕ್ ಹಾಕಿಕೊಂಡಿರಲಿಲ್ಲ.
ಇನ್ನು ಬಾಗಲಕೋಟೆ ಹಳೆ ನಗರದ ಪ್ರಮುಖ ರಸ್ತೆಗಳ ಮೂಲಕ ಸೈಕಲ್ ಜಾಥಾ ಸಂಚರಿಸಿ, ನವನಗರದ ಎಪಿಎಂಸಿ ಮೂಲಕ ಹಾಯ್ದು,ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ವೃತ್ತದಲ್ಲಿ ಸಮಾಪ್ತಿಗೊಂಡಿತು. ಸೈಕಲ್ ಜಾಥಾದಲ್ಲಿ 80ಕ್ಕೂ ಹೆಚ್ಚು ಕಾರ್ಯಕರ್ತರು ಸೈಕಲ್ ನೊಂದಿಗೆ ಭಾಗಿಯಾಗಿ ಗಮನಸೆಳೆದರು.
ಮಹಿಳಾ ಕಾರ್ಯಕರ್ತರು ಸೈಕಲ್ ಏರಿ ಗಮನ ಸೆಳೆದರು. ಆದರೆ ಸೈಕಲ್ ಜಾಥಾ ನೆಪದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದು ವಿಪರ್ಯಾಸವೇ ಸರಿ.




