ಆನಂದ್ ಸಿಂಗ್ ಮನವೊಲಿಕೆಗೆ ಬಿಜೆಪಿ ಕಸರತ್ತು

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜಿನಾಮೆ ಬೆದರಿಕೆ ಹಾಕಿರುವ ಸಚಿವ ಆನಂದ್ ಸಿಂಗ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ತೀವ್ರ ಕಸರತ್ತು ನಡೆಸಿದೆ. ಆನಂದ್ ಸಿಂಗ್ ಅವರೊಂದಿಗೆ ತಾವು ನಿರಂತರ ಸಂಪರ್ಕದಲ್ಲಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆನಂದ್ ಸಿಂಗ್ ಅವರ ಭಾವನೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅವರು ಬಂದರೆ ಮಾತನಾಡಲು ಸಿದ್ದನಿದ್ದೇನೆ. ಯಾವುದೋ ಭಾವನಾತ್ಮಕ ಗಳಿಗೆಯಲ್ಲಿ ಅವರು ತಮ್ಮ ವಿಚಾರಗಳನ್ನು ಹೇಳಿದ್ದಾರೆ ಎಂದೆನಿಸುತ್ತದೆ. ಶಾಂತವಾಗಿ ಅವರೊಂದಿಗೆ ಕೂತು ಎಲ್ಲಾ ವಿಚಾರಗಳ ಕುರಿತು ಸಮಗ್ರ ಮಾತನಾಡುವೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೂ ಆನಂದ್ ಸಿಂಗ್ ಜತೆ ಈಗಾಗಲೇ ಮಾತನಾಡಿದ್ದಾರೆ. ಜತೆಗೆ ಆನಂದ್ ಸಿಂಗ್ ಸ್ನೇಹಿತರೂ ಅವರೊಂದಿಗೆ ಮಾತನಾಡಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷ ವರಿಷ್ಠರೂ ಕೂಡ ಅವರೊಂದಿಗೆ ಮಾತನಾಡುತ್ತಾರೆ. ನಂತರ ಎಲ್ಲವೂ ಬಗೆಹರಿಯುವ ನಿರೀಕ್ಷೆ ಇದೆ. ಒಳ್ಳೇಯದಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಸಚಿವ ಆನಂದ್ ಸಿಂಗ್ ಗುರುವಾರ ಬೆಂಗಳೂರಿಗೆ ಬರುವ ಕಾರ್ಯಕ್ರಮವಿತ್ತು. ನಾಳೆ ತಮಗೆ ಮಂಗಳೂರು ಪ್ರವಾಸ ಕಾರ್ಯಕ್ರಮ ನಿಗದಿಯಾಗಿರುವುದರಿಂದ ಸಾಧ್ಯವಾದರೆ ಇಂದೇ ಅವರು ತಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಪಕ್ಷ ವರಿಷ್ಠರಿಂದ ತಮಗೆ ಯಾವುದೇ ಸೂಚನೆ ಇಲ್ಲ. ಆನಂದ್ ಸಿಂಗ್ ಭೇಟಿ ನಂತರ ವರಿಷ್ಠರೊಂದಿಗೆ ಚರ್ಚಿಸುವೆ ಎಂದು ಮುಖ್ಯಮಂತ್ರಿ ಹೇಳಿದರು.
