ನೈತಿಕ ಪೊಲೀಸ್ಗಿರಿ ನಡೆಸಿದ ಆರೋಪದ ಮೇಲೆ ಮೂವರ ಬಂಧನ

ದಾವಣಗೆರೆ: ನಗರದ ನಿಟ್ಟುವಳ್ಳಿ ಬಡಾವಣೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕೆಟಿಜೆ ನಗರ ಠಾಣೆ ಪೊಲೀಸರು ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದ ಮೇಲೆ ಕೆ ಆರ್ ಎಸ್ ಪಕ್ಷದ ಮೂವರು ಕಾರ್ಯಕರ್ತರನ್ನ ಬಂಧಿಸಿದ್ದಾರೆ.
ಮಾಲತೇಶ್, ಶಶಿಕುಮಾರ್ ಹಾಗೂ ಅಭಿಷೇಕ್ ಬಂಧಿತ ಆರೋಪಿಗಳು. ಕಳೆದ ಜುಲೈ 31ರಂದು ನಿಟ್ಟುವಳ್ಳಿಯ ಆರೋಗ್ಯ ಕೇಂದ್ರದಲ್ಲಿ ಕೋರೊನಾ ಲಸಿಕೆ ಹಾಕಲಾಗುತ್ತಿತ್ತು. ಈ ವೇಳೆ ಲಸಿಕೆಗಾಗಿ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿತ್ತು.
ಆಗ ಕೆ ಆರ್ ಎಸ್ ಪಕ್ಷದ ಮೂವರು ಪ್ರಾಥಮಿಕ ಕೇಂದ್ರದ ಒಳಗೆ ನುಗ್ಗಿ ವಿಡಿಯೋ ಮಾಡುತ್ತೇವೆ. ಆಸ್ಪತ್ರೆಯವರು ಭ್ರಷ್ಟರಿದ್ದಾರೆ ಎಂದು ಸಾರ್ವಜನಿಕರಿಗೆ ಗಲಾಟೆ ಮಾಡಲು ಪ್ರಚೋದನೆ ನೀಡಿದ್ದಾರೆ. ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಶಾಂತಿ ಸೃಷ್ಟಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮೂವರ ವಿರುದ್ಧ ಕೇಸ್ ದಾಖಲಾಗಿದೆ.
ಅಲ್ಲದೇ, ಈ ಘಟನೆ ಬಗ್ಗೆ ತಹಶೀಲ್ದಾರ್ ರಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ಕೂಡ ನಡೆಯುತ್ತಿದೆ. ಮೂವರು ಗಲಾಟೆ ವಿಡಿಯೋ ತೋರಿಸಿ ಮೂವರಿಗೆ ತಲಾ 30 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೆಟಿಜೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ವಿರುದ್ಧವೇ ದೂರು ಕೊಡಲು ಹೋದ ಮೂವರನ್ನು ಬಂಧಿಸಲಾಗಿದೆ.




