ಸಖರಾಯಪಟ್ಟಣ: ಇತಿಹಾಸಪ್ರಸಿದ್ಧ ಜಾತ್ರೆ ರದ್ದು

ಚಿಕ್ಕಮಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಇತಿಹಾಸಪ್ರಸಿದ್ಧ ಸಖರಾಯಪಟ್ಟಣ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಸಖರಾಯಪಟ್ಟಣ ಶಕುನ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಜ.14ರಿಂದ 17ರವರೆಗೆ ನಡೆಯಬೇಕಿತ್ತು. ಈ ಜಾತ್ರೆಗೆ ಭಾರೀ ಸಂಖ್ಯೆಯಲ್ಲಿ ಜನ ಸೇರುವುದನ್ನು ನಿಯಂತ್ರಿಸಲು ಸರ್ಕಾರದ ಪರಿಷ್ಕೃತ ಆದೇಶದಂತೆ ಜಾತ್ರೆ ಮತ್ತು ರಥೋತ್ಸವಗಳನ್ನು ರದ್ದುಗೊಳಿಸಲಾಗಿದೆ.
ಜಾತ್ರಾ ಮಹೋತ್ಸವದ ಸಂಪ್ರದಾಯ ವಿಧಿ ವಿಧಾನಗಳಿಗೆ ಅಡ್ಡಿಪಡಿಸುವುದಿಲ್ಲ. ಈ ಕಾರ್ಯಗಳಿಗೆ 50ಕ್ಕಿಂತ ಅಧಿಕ ಜನ ಸೇರದೆ ಆಚರಿಸಬಹುದೆಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಡಿ.13ರಂದು ವೈಕುಂಠ ಏಕಾದಶಿ ಹಿರೇಮಗಳೂರಿನ ಕೋದಂಡರಾಮ ದೇಗುಲ ಸಹಿತ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯಲಿದೆ. ಇದರಲ್ಲೂ ಸಾವಿರಾರು ಜನ ಸೇರುವ ನಿರೀಕ್ಷೆ ಇರುವುದರಿಂದ ಬಹುತೇಕ ವೈಕುಂಠ ಏಕಾದಶಿಗೂ ಜಿಲ್ಲಾಡಳಿತ ನಿರ್ಬಂಧ ಹೇರುವ ಸಾಧ್ಯತೆಗಳಿವೆ. ಅಲ್ಲದೆ ಸಂಕ್ರಾಂತಿ ಹಬ್ಬದಲ್ಲೂ ದೇಗುಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ನಿರ್ಬಂಧ ವಿಧಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಆಲೋಚಿಸಿದೆ.



