ಕೊಡಗಿನ ಐತಿಹಾಸಿಕ ರಾಜಾಸೀಟು ಉದ್ಯಾನವನ ಇನ್ನು ‘ಗ್ರೇಟರ್ ರಾಜಾಸೀಟು’

ಮಡಿಕೇರಿ : ಜಿಲ್ಲೆಯ ಐತಿಹಾಸಿಕ ರಾಜಸೀಟು ಉದ್ಯಾನವನವನ್ನು ‘ಗ್ರೇಟರ್ ರಾಜಸೀಟು’ ಆಗಿ ಅಭಿವೃದ್ಧಿ ಪಡಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ರಾಜಾಸೀಟು ಉದ್ಯಾನವನ ವ್ಯಾಪ್ತಿಗೆ ರೈಲ್ವೆ ಟ್ರ್ಯಾಕ್ ಸೇರ್ಪಡೆಯಾಗಿದ್ದು, ಈ ಹಿನ್ನೆಲೆ ರಾಜಸೀಟು ಉದ್ಯಾನವನ್ನು ಗ್ರೇಟರ್ ರಾಜಸೀಟು ಆಗಿ ಅಭಿವೃದ್ಧಿ ಪಡಿಸಲು ನೀಲನಕ್ಷೆ ತಯಾರಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಪುಟಾಣಿ ರೈಲು ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು, ಮ್ಯೂಸಿಕಲ್ ಫೌಂಟೈನ್ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಇದ್ದು, ಕೂಡಲೇ ಸರಿಪಡಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಕೂರ್ಗ್ ವಿಲೇಜ್ ಈಗಾಗಲೇ ಉದ್ಘಾಟನೆಯಾಗಿದ್ದು, ತಕ್ಷಣವೇ ಕಾರ್ಯಾರಂಭವಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗೆ ಡಾ.ಬಿ.ಸಿ.ಸತೀಶ ಅವರು ಸೂಚಿಸಿದರು.
ರಾಜರ ಗದ್ದುಗೆ, ನೆಹರು ಮಂಟಪ ನಿರ್ವಹಣೆ, ರಾಜರ ಗದ್ದುಗೆ ಗೇಟಿನ ಬಳಿ ಹೈಮಾಸ್ಕ್ ಲೈಟ್ ಅಳವಡಿಸುವುದು ಮತ್ತಿತರ ಬಗ್ಗೆ ಚರ್ಚಿಸಲಾಯಿತು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಅವರು ರಾಜಸೀಟು ಅಭಿವೃದ್ಧಿ ಸಂಬಂಧ ತೋಟಗಾರಿಕೆ ಇಲಾಖೆಯಿಂದ ಕೈಗೊಂಡಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಡಿಸೆಂಬರ್, 25 ರ ಕ್ರಿಸ್ಮಸ್ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಕಾಫಿ ಮಂಡಳಿ ಸಹಕಾರದಲ್ಲಿ ‘ಕಾಫಿ ಮೇಳ’ ಆಯೋಜಿಸುವುದು, ಹಾಗೆಯೇ ರಜೆ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.
