
ನವದೆಹಲಿ: ಪ್ರತಿಭಟನೆ ಮಾಡುವಾಗ ಅನಿರ್ಧಿಷ್ಟವಾಗಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಲು ಪ್ರತಿಭಟನಾಕಾರರಿಗೆ ಅವಕಾಶ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಂಯಕ್ತ ಕಿಸಾನ್ ಮೋರ್ಚಾಕ್ಕೆ ರಸ್ತೆ ತಡೆಯುವ ಹಕ್ಕು ಇದೆಯೇ ಎಂದು ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಸಿ ಟಿ ಕುಮಾರ್ ಅವರಿದ್ದ ನ್ಯಾಯಪೀಠವು ಪ್ರಶ್ನಿಸಿದಾಗ, ಪ್ರತಿಭಟನೆ ವೇಳೆ ರಸ್ತೆ ನಿರ್ವಹಣೆಯನ್ನು ಪೊಲೀಸರು ಸಮರ್ಪಕವಾಗಿ ಮಾಡಬಹುದು. ಒಂದು ವೇಳೆ ಪೊಲೀಸರಿಗೆ ಸಾಧ್ಯವಾಗದಿದ್ದರೆ, ರೈತರಿಗೆ ರಾಮ್ ಲೀಲಾ ಮೈದಾನದಲ್ಲಿ ಅಥವಾ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಬಹುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಕ್ರಿಯಿಸಿತು.
ರೈತ ಹೋರಾಟಗಾರರನ್ನು ರಸ್ತೆಗಳಿಂದ ತೆರವುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಇತರೆ ರೈತ ಸಂಘಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಈ ಪ್ರಕರಣದ ವಿಚಾರಣೆ ಮುಂದಿನ ಡಿ.7ರಂದು ನಡೆಯಲಿದೆ.



