Narendr Modi: ಬಜೆಟ್ನಲ್ಲಿ ಬಡವರು, ಮಧ್ಯಮವರ್ಗದವರಿಗೆ ಒತ್ತು ನೀಡಲಾಗಿದೆ: ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ದೇಶವನ್ನು ಆಧುನಿಕತೆಯತ್ತ ಕೊಂಡೊಯ್ಯುವ ಬಜೆಟ್ ಇದು. ಬಜೆಟ್ನಲ್ಲಿ ಬಡವರು, ಮಧ್ಯಮವರ್ಗದವರಿಗೆ ಒತ್ತು ನೀಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕರ್ತರ ಜೊತೆ ಪ್ರಧಾನಮಂತ್ರಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಜೆಟ್ನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಒತ್ತು ನೀಡಲಾಗಿದೆ. ಈ ವರ್ಷ 4 ಕೋಟಿ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಿದ್ದೇವೆ ಎಂದರು.
‘ಹರ್-ಘರ್ ನಲ್-ಜಲ್’ ಯೋಜನೆಯಡಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಭಾರತದ ಆರ್ಥಿಕತೆಯ ಗಾತ್ರ ಹೆಚ್ಚಿದೆ. ಹಿಂದಿನ ಸರ್ಕಾರದ ತಪ್ಪು ನಿರ್ಣಯಗಳನ್ನ ಈಗ ಸರಿಪಡಿಸಲಾಗುತ್ತಿದೆ. ದೇಶದ ರೈತರ ಜೀವನ ಬದಲಾಗಬೇಕು. ಬಡತನದ ನಿರ್ಮೂಲನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ವಿಶ್ವವೇ ಕೊರೊನಾದಿಂದ ಕಂಗಾಲಾಗಿದೆ. ಭಾರತ ಇನ್ನೂ ಕೊರೊನಾ ವಿರುದ್ಧ ಹೋರಾಡುತ್ತಲೇ ಇದೆ. ಕೊರೊನಾ ಬಳಿಕ ಈ ದೇಶ ಬದಲಾಗಿದೆ. ಕೊರೊನಾ ನಮ್ಮ ಮುಂದೆ ಹತ್ತಾರು ಸವಾಲುಗಳನ್ನ ತಂದೊಡ್ಡಿದೆ. ಇಂತಹ ಸಮಯದಲ್ಲಿ ಇದು ಉತ್ತಮ ಬಜೆಟ್ ಆಗಿದೆ ಎಂದರು
ಆಧುನಿಕ ಭಾರತವನ್ನ ನಾವು ನಿರ್ಮಾಣ ಮಾಡಬೇಕು. ನಮ್ಮ ದೇಶವನ್ನ ಅಭಿವೃದ್ಧಿಯತ್ತ ಮುನ್ನಡೆಸಬೇಕು. ವಿಶ್ವವೇ ಈಗ ಭಾರತದತ್ತ ತಿರುಗಿ ನೋಡುತ್ತಿದೆ. ಭಾರತ ಸಂಪೂರ್ಣವಾಗಿ ಆತ್ಮ ನಿರ್ಭರವಾಗಬೇಕಿದೆ.. ವಿಶ್ವದ ಆರ್ಥಿಕ ಸೂಚ್ಯಾಂಕ ಏರಿಕೆಯಾಗುತ್ತಿರುವ ಪಟ್ಟಿಯಲ್ಲಿ ಭಾರತ ಇದೆ ಎಂದು ತಿಳಿಸಿದರು.
