ಯಾರಿಗೂ ತಿಳಿಯದೆ ಮಜೆಸ್ಟಿಕ್ ನಿರ್ದೇಶಕರ ಕುಟುಂಬಕ್ಕೆ ಸಹಾಯ ಮಾಡಿದ ದರ್ಶನ್

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಪರೋಪಕಾರದ ಗುಣ ಯಾರಿಗೂ ಗೊತ್ತೆ ಇಲ್ಲ. ಯಾಕಂದ್ರೆ ದರ್ಶನ್ ಆಗಲಿ ಅವರ ಆಪ್ತರಾಗಲಿ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಇದೀಗ ದರ್ಶನ್ ಸಹಾಯ ಹಸ್ತ ಮಾಡಿರುವುದನ್ನ ಸ್ನೇಹಿತರು ಹೇಳಿಕೊಂಡಿದ್ದು ದಾಸನ ಅಭಿಮಾನಿಗಳು ಸಾರಥಿಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ನಟ ದರ್ಶನ್ ನಾಯಕನಾಗಿ ನಟಿಸಿದ್ದ ಮೊದಲ ಸಿನಿಮಾ ಮೆಜೆಸ್ಟಿಕ್ ಬಿಡುಗಡೆಯಾಗಿ ಇಪ್ಪತ್ತು ವರ್ಷ ಕಳೆದಿದೆ. ಈ ಖುಷಿಯನ್ನ ಸೆಲೆಬ್ರೇಟ್ ಮಾಡಲು ಕೆಲವು ದಿನಗಳ ಹಿಂದಷ್ಟೇ ಸಿನಿಮಾದ ನಿರ್ಮಾಪಕರು ಕಾರ್ಯಕ್ರಮವೊಂದನ್ನ ಹಮ್ಮಿಕೊಂಡಿದ್ದರು. ಅಂದ್ಹಾಗೆ ಕಳೆದ ಕೆಲ ತಿಂಗಳ ಹಿಂದೆ ಚಿತ್ರದ ನಿರ್ದೇಶಕ ಪಿ. ಎನ್ ಸತ್ಯ ನಿಧನ ಹೊಂದಿದ್ದಾರೆ. ಕಾರ್ಯಕ್ರಮದಲ್ಲಿ ಸತ್ಯ ಅವರನ್ನ ನೆನಪಿಸಿಕೊಂಡ ದರ್ಶನ್ ಯಾರಿಗೂ ತಿಳಿಯದಂತೆ ಸಹಾಯ ಮಾಡಿದ್ದಾರೆ.
ನಮ್ಮ ಕುಟುಂಬ ಸತ್ಯ ಅವರಿಗೆ ಅಭಾರಿಯಾಗಿರುತ್ತದೆ ಎಂದ ದರ್ಶನ್ “ಮಾರಿಯನ್ನ ಒಲಿಸಿಕೊಳ್ಳಬೇಕಂದ್ರೆ ಮರಿ ಹೊಡೀಬೇಕು. ದಾಸ ಎಂಟ್ರಿ ಕೊಡಬೇಕೆಂದರೆ ಕೋಳಿ ಕೊಯ್ಯಬೇಕು ಎಂದು ಆವತ್ತು ಪಿ.ಎನ್.ಸತ್ಯ ಅವರು ಕೋಳಿ ಕೊಯ್ಡು ದೃಷ್ಟಿ ತೆಗೆದು ನನ್ನನ್ನು ಅಖಾಡಕ್ಕೆ ಬಿಟ್ಟರು. ಅವತ್ತು ಬಿಟ್ಟ ಎತ್ತು ಇವತ್ತಿನ ವರೆಗೆ ಗಾಣದಲ್ಲಿ ಸುತ್ತುತ್ತಲೇ ಇದೆ. ಇನ್ನೂ ಕೆಲವು ವರ್ಷ ಗಾಣದಲ್ಲಿ ಸುತ್ತುತ್ತಲೇ ಇರುತ್ತದೆ ಅಷ್ಟು ಶಕ್ತಿಯನ್ನು ಸತ್ಯ ಅವರು ಅಂದೇ ನನಗೆ ತುಂಬಿ ಕಳಿಸಿದ್ದಾರೆ ಎಂದು ದರ್ಶನ್ ಸತ್ಯ ಕುಟುಂಬಕ್ಕೆ ಧನ್ಯವಾದ ತಿಳಿಸಿದರು.
ದರ್ಶನ್ ಕೇವಲ ಬಾಯಿ ಮಾತಿಗೆ ಸತ್ಯ ಕುಟುಂಬಕ್ಕೆ ಧನ್ಯವಾದ ಹೇಳಿಲ್ಲ. ಬದಲಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸತ್ಯ ಅವರ ಪತ್ನಿಗೆ ಹತ್ತು ಲಕ್ಷ ಹಣವನ್ನ ಲಕ್ಕೋಟೆಯಲ್ಲಿ ಇಟ್ಟು ಕೊಟ್ಟಿದ್ದಾರಂತೆ. ಈ ವಿಷಯ ಯಾರಿಗೂ ಗೊತ್ತಿಲ್ಲ ಎಂದು ದರ್ಶನ್ ಆಪ್ತ ಗೆಳೆಯ ಅಣಜಿ ನಾಗರಾಜ್ ಹೇಳಿದ್ದಾರೆ.
ಇದೇ ವೇಳೆ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರಿಗೆ ದರ್ಶನ್ ಧನ್ಯವಾದ ಹೇಳಿದ್ದಾರೆ. ಬೀದಿಯಲ್ಲಿ ಕುಳಿತು ಅನ್ನ ತಿನ್ನುತ್ತಿದೆ ಆದರೆ ರಸ್ತೆ ಮೇಲೆ ಹಾಕುತ್ತಿದ್ದರು. ತಿನ್ನುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲದ ಪರಿಸ್ಥಿತಿಯಲ್ಲಿದ್ದ. ಆಗ ನನಗೆ ತಟ್ಟೆ ಕೊಟ್ಟವರು ಮಜೆಸ್ಟಿಕ್ ಚಿತ್ರದ ನಿರ್ಮಾಪಕರಾದ ರಾಮಮೂರ್ತಿ ಹಾಗೂ ರಮೇಶ್ ಅವರು. ಇಂದಿಗೂ ಸಹ ಅದೇ ತಟ್ಟೆಯಲ್ಲಿ ಅನ್ನ ತಿನ್ನುತ್ತಿದ್ದೇನೆ. ನಾನು ನನ್ನ ಕುಟುಂಬ, ನನ್ನ ಅಮ್ಮ, ತಮ್ಮ, ಅವನ ಕುಟುಂಬ ಎಂದೂ ನಿಮ್ಮನ್ನು ಮರೆಯುವುದಿಲ್ಲ. ಜೀವ ಇರುವವರೆಗೆ ನೆನಪಿಟ್ಟುಕೊಳ್ಳುತ್ತೇವೆ ಎಂದರು.




