ಹುಬ್ಬಳ್ಳಿ - ಧಾರವಾಡ
ನೀರು ತರಲು ಹೋದ ಬಾಲಕಿ ಮೇಲೆ ಅತ್ಯಾಚಾರ

ಧಾರವಾಡ: ನೀರು ತರಲು ಮನೆ ಹೊರಗಡೆ ಹೋಗಿದ್ದ ಅಪ್ರಾಪ್ತೆ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿದ ಘಟನೆ, ಕುಂದಗೋಳ ತಾಲೂಕಿನ ಗ್ರಾಮವೊಂದರಲ್ಲಿ ಕಳೆದ ಮಂಗಳವಾರ ರಾತ್ರಿಯೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಗ್ರಾಮವೊಂದರಲ್ಲಿ 23 ವರ್ಷದ ಯುವಕ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅಷ್ಟೇ ಅಲ್ಲದೆ ತನ್ನ ಕೃತ್ಯವನ್ನು ಯಾರಿಗಾದರೂ ಹೇಳಿದರೆ ಜೀವ ತೆಗೆಯುವ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.
ಘಟನೆ ನಂತರ ಗುರುವಾರ ಅಸ್ವಸ್ಥಗೊಂಡ ಬಾಲಕಿಯನ್ನು ಮನೆಯವರು ವಿಚಾರಣೆ ನಡೆಸಿದಾಗ ಪಾಲಕರಿಗೆ ವಿಚಾರ ತಿಳಿದಿದೆ. ಸದ್ಯ ಬಾಲಕಿಯನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಿಸಲಾಗಿದೆ.
ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ ತವರು ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಶಾಸಕಿ ಕ್ಷೇತ್ರದಲ್ಲಿಯೇ ಮಹಿಳೆಯರಿಗೆ ರಕ್ಷಣೆ ಇಲ್ವಾ ಎಂಬ ಪ್ರಶ್ನೆಯನ್ನು ಈಗ ಸಾರ್ವಜನಿಕರು ಮಾಡುತ್ತಿದ್ದಾರೆ.




