ಸೋನಿಯಾ ಗಾಂಧಿ ಟೀಕಿಸುವ ನೈತಿಕತೆ ಮುತಾಲಿಕ್ ಗೆ ಇಲ್ಲ: ಹೆಚ್ ಆಂಜನೇಯ

ಬಾಗಲಕೋಟೆ: ಕಾಂಗ್ರೆಸ್ಸಿಗರು ಸೋನಿಯಾಗೆ ಹೆದರಿ ಮತಾಂತರ ಕಾಯ್ದೆ ವಿರೋಧಿಸುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಹೇಳಿಕೆಗೆ ಮಾಜಿ ಸಚಿವ ಹೆಚ್. ಆಂಜನೇಯ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಹುದ್ದೆ ನಿರಾಕರಿಸಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದ ತ್ಯಾಗ ಮಹಿಳೆ, ಆದರ್ಶಮಯಿ ಎಂದು ಬಣ್ಣಿಸಿದರು. ಭಾರತದ ಹೆಸರನ್ನು ಇಡೀ ಪ್ರಪಂಚಕ್ಕೆ ಎತ್ತಿ ಹಿಡಿದು ಕೀರ್ತಿ ತಂದವರು ಸೋನಿಯಾಗಾಂಧಿ ಎಂದರು.
ಪ್ರಧಾನಿ ಹುದ್ದೆ ತ್ಯಾಗ ಮಾಡಿದ ಆದರ್ಶ ಮಹಿಳೆ ಸೋನಿಯಾ ಅವರನ್ನು ಟೀಕಿಸುವ ಯೋಗ್ಯತೆ, ನೈತಿಕತೆ ಮುತಾಲಿಕ್ ಗೆ ಇಲ್ಲ. ಸೋನಿಯಾಗಾಂಧಿ ಈ ದೇಶದ ಆದರ್ಶ ಮಹಿಳೆ. ಅವರನ್ನು ಓಲೈಸಿ ಹೇಳುವಂತಹದ್ದೇನಿಲ್ಲ. ದೇಶದಲ್ಲಿ ಜನರು ವಿರೋಧ ಮಾಡುವ ಕಾಯ್ದೆ ಜಾರಿಗೆ ತಂದಲ್ಲಿ ನಾವು ವಿರೋಧಿಸುತ್ತೇವೆ ಎಂದರು.
ಅವರಿವರನ್ನು ಓಲೈಸೋರು ನಾವಲ್ಲ. ಸೋನಿಯಾಗಾಂಧಿ ಎಲ್ಲ ದೇವರನ್ನು ಆರಾಧಿಸಿ ಸರ್ವ ಧರ್ಮಿಯ ನಾಯಕಿಯಾಗಿದ್ದಾರೆ. ವಿದೇಶದಿಂದ ಬಂದು ಅತ್ತೆ ಕಳೆದುಕೊಂಡಳು, ಗಂಡನನ್ನು ಕಳೆದುಕೊಂಡು ವಿಧವೆ ಆದವರು. ಅವರು ಪ್ಯಾಕಪ್ ಮಾಡಿಕೊಂಡು ಹೋಗಲಿಲ್ಲ. ಎಲ್ಲವನ್ನು ಬಿಟ್ಟು ಇಲ್ಲಿಯೇ ಉಳಿದರು. ಇಂತವರನ್ನು ಟೀಕೆ ಮಾಡೋರಿಗೆ ಯಾವುದೇ ಜ್ಞಾನ ಇಲ್ಲ ಎಂದ ವಾಗ್ದಾಳಿ ನಡೆಸಿದರು.




