ಸಿಎಂ ಬೊಮ್ಮಾಯಿ ಸರ್ಕಾರ ಬಹಳ ದಿನ ಇರುತ್ತೆ ಅನಿಸುತ್ತಿಲ್ಲ: ಸಿದ್ದರಾಮಯ್ಯ

ಮಂಡ್ಯ : ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಬಹಳ ದಿನ ಇರುತ್ತೆ ಅನುಸುತ್ತಿಲ್ಲ. ಅವರಾಗಿ ಅವರು ಬೀಳಬಹುದೇ ಹೊರತು, ನಾವು ಸರ್ಕಾರ ಬೀಳಿಸುವ ಪ್ರಯತ್ನ ಮಾಡಲ್ಲ. ಎಷ್ಟು ದಿನ ಸರ್ಕಾರ ಇರುತ್ತೆ ಅಂತ ನಾನು ಜಾತಕ ಹೇಳಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನವರು ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇಲ್ಲದವರು. ಅವರು ಅವಕಾಶವಾದಿಗಳು. ಅಂತಹವರು ಅವರ ಉಳಿವಿಗಾಗಿ ಯಾವಾಗ ಏನು ಬೇಕಾದರೂ ಮಾಡ್ತಾರೆ. ಅವರಿಗೆ ಯಾವುದೇ ತತ್ವ, ಸಿದ್ಧಾಂತ ಇಲ್ಲ. ಅವರ ಶಾಕರುಗಳನ್ನ ಉಳಿಸಿಕೊಳ್ಳಲು, ತಮ್ಮ ಕೆಲಸ ಮಾಡಿಸಿಕೊಳ್ಳಲು ಬಿಜೆಪಿ ಜೊತೆ ಚೆನ್ನಾಗಿರ್ತಾರೆ ಎಂದರು.
ಮೇಕೆದಾಟು ಪ್ರಾರಂಭ ಮಾಡಲು ಯಾವುದೇ ಅಡ್ಡಿ ಇಲ್ಲ. ಕಾನೂನಿನಲ್ಲೂ ಕೂಡ ತೊಂದರೆ ಇಲ್ಲ. ತಮಿಳುನಾಡಿನವರನ್ನ ಕೇಳಿ ಮಾಡಬೇಕಾದಂತ ಅಗತ್ಯವಿಲ್ಲ. ಬಿಜೆಪಿಯವರಿಗೆ ಬದ್ದತೆ ಇದ್ರೆ ಕೂಡಲೆ ಆ ಕೆಲಸ ಮಾಡಲಿ ಎಂದು ರಾಜ್ಯ ಸರ್ಕಾರವನ್ನು ಸಿದ್ದರಾಮಯ್ಯ ಆಗ್ರಹಿಸಿದರು.
ಹಳೆ ಮೈಸೂರು ಪ್ರಾಂತ್ಯಕ್ಕೆ ಬಿಜಪಿ ಕಡೆಗಣನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯಕ್ಕೆ ಮಂತ್ರಿ ಕೊಟ್ಟಿದ್ದಾರೆ, ಮೈಸೂರಿಗೆ ಮಂತ್ರಿ ಕೊಟ್ಟಿಲ್ಲ ಹಾಗಾಗಿ ಹಳೆ ಮೈಸೂರು ಭಾಗಕ್ಕೆ ಪ್ರಾತಿನಿದ್ಯ ಇಲ್ಲ. ಬಿಜೆಪಿ ಸರ್ಕಾರ ಹಳೆ ಮೈಸೂರು ಭಾಗವನ್ನ ಕಡೆಗಣನೆ ಮಾಡಿದೆ. ಈಗ ಸರ್ಕಾರ ರಚನೆಯಾಗಿ 10 ದಿನ ಆಗಿದೆ ಕಾದು ನೋಡೋಣ ಎಂದರು.
