ಯುಪಿ: ಚುನಾವಣೆ ಎದುರಿಸಲು ಏಳು ಮಂತ್ರಿಗಳ ಯಾತ್ರೆಗೆ ಬಿಜೆಪಿ ತಯಾರಿ

ನವದೆಹಲಿ: ಉತ್ತರ ಪ್ರದೆಶದಲ್ಲಿ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವಂತೆಯೇ ಏಳು ಕೇಂದ್ರ ಸಚಿವರುಗಳೊಂದಿಗೆ ಜನಾಶೀರ್ವಾದ ಯಾತ್ರೆಗೆ ಬಿಜೆಪಿ ಸಿದ್ಧತೆ ನಡೆಸಿದೆ.
ಇತ್ತೀಚಿನ ಸಂಪುಟ ಪುನಾರಚನೆಯೊಂದಿಗೆ ಉತ್ತರ ಪ್ರದೇಶದಿಂದ ಬಿಜೆಪಿ ಆರು ಮಂದಿ ಮತ್ತು ಅಪ್ನಾ ದಳದ ಅನುಪ್ರಿಯಾ ಪಟೇಲ್ ಸೇರಿ ಏಳು ಸಂಸದರನ್ನು ಕೇಂದ್ರ ಮಂತ್ರಿಮಂಡಳ ಒಳಗೊಂಡಂತಾಗಿದೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಈ ಸೇರ್ಪಡೆ ನಡೆದಿರುವುದು ರಹಸ್ಯವೇನೂ ಅಲ್ಲ.
ಇದೀಗ ಈ ಏಳೂ ಸಚಿವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಂದ ಸೂಚನೆಯೊಂದು ಹೋಗಿದೆ. ಅದರಂತೆ, ಈ ಸಚಿವರುಗಳು ಉತ್ತರ ಪ್ರದೇಶದಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಳ್ಳಬೇಕಿದೆ. ಒಬ್ಬೊಬ್ಬರೂ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ, 4-5 ಜಿಲ್ಲೆಗಳಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಳ್ಳಬೇಕಿದೆ.
ಆಗಸ್ಟ್ 15ರ ಬಳಿಕ ಈ ಏಳೂ ಸಚಿವರು ಚುನಾವಣೆ ಉದ್ದೇಶದ ಈ ಯಾತ್ರೆ ಕೈಗೊಳ್ಳುವಂತೆ ಸೂಚನೆ ಹೋಗಿದೆ.
ಇದಲ್ಲದೆ, ಆಗಸ್ಟ್ 5ರಂದು ಅನ್ನ ಮಹೋತ್ಸವ ಆಹಾರ ಧಾನ್ಯ ಮೆಳವನ್ನು ಹಮ್ಮಿಕೊಳ್ಳಲಾಗುತ್ತಿದ್ದು, 80 ಸಾವಿರ ಪಡಿತರ ಮಾರಾಟಗಾರರನ್ನುದ್ದೇಶಿಸಿ ಪ್ರಧಾನಿ ಮೋದಿ ವಿಡಿಯೋ ಲಿಂಕ್ ಮೂಲಕ ಮಾತನಾಡುವ ನಿರೀಕ್ಷೆ ಇದೆ.
ಕೋವಿಡ್ ಲಸಿಕಾ ಕೇಂದ್ರಗಳಿಗೆ ಹೋಗಿ, ಲಸಿಕೆ ತೆಗೆದುಕೊಳ್ಳಲು ಜನರನ್ನು ಪ್ರೇರೇಪಿಸುವಂತೆ ಎಲ್ಲಾ ಸಂಸದರಿಗೆ ಪಕ್ಷ ಸೂಚಿಸಿದೆ.
