ಕಾಂಗ್ರೆಸ್ ಕಾರ್ಯಕರ್ತರ ಆತ್ಮಾವಲೋಕನ ಸಭೆ: ಅಸಮಾಧಾನ ಸ್ಫೋಟ

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅಸಮಾಧಾನ ಸ್ಫೋಟಗೊಂಡು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮತ್ತು ಕೆಲವು ಮುಖಂಡರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.ವಿಧಾನಪರಿಷತ್ ಹಾಗೂ ನಗರಸಭೆ ಚುನಾವಣೆಯಲ್ಲಿ ಪಕ್ಷ ಸೋಲಲು ಬಿ.ಎಲ್. ಶಂಕರ್ ಹಾಗೂ ಕೆಲವರು ಕಾರಣ ಎಂದು ಯುವಕರ ಗುಂಪೊಂದು ಕೂಗಾಟ ನಡೆಸಿದಾಗ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಪಕ್ಷದ ಅಧ್ಯಕ್ಷ ಅಂಶುಮಂತ್, ವಕ್ತಾರ ದೇವರಾಜ್, ಏ ಎನ್ ಮಹೇಶ್, ಎಂ ಎಲ್ ಮೂರ್ತಿ ಮತ್ತಿತರರು ಸೇರಿ ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಭೆಯಲ್ಲಿ ತೀವ್ರ ಗೊಂದಲದ ವಾತಾವರಣ ಉಂಟಾಗಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು.
ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದರೂ ಮಾಜಿ ಸಚಿವೆ ಮೋಟಮ್ಮ ಇತರ ಕೆಲವರು ಮೂಕ ಪ್ರೇಕ್ಷಕರಾಗಿ ಕುಳಿತಿದ್ದರು. ಕೊನೆಗೆ ಗಾಯತ್ರಿ ಶಾಂತೇಗೌಡ ಆಗಮಿಸಿ ಕಾರ್ಯಕರ್ತರ ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.
