ಕಾಂಗ್ರೆಸ್ ನಾಯಕರು ಹಗಲು ಗನಸು ಕಾಣುತ್ತಿದ್ದಾರೆ: ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಬಿಜೆಪಿಯ ಬಿಜೆಪಿಯ ಯಾವುದೇ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹಗಲು ಕನಸು ಕಾಣ್ತಾ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಅನ್ನೋದು ಅವರಿಗೆ ಅರ್ಥ ಆಗಿದೆ. ಅದಕ್ಕೆ ಜನರ ಮನಸ್ಸು ಡೈವರ್ಟ್ ಮಾಡ್ತಿದ್ದಾರೆ ಎಂದರು.
ಶಿಸ್ತು ಉಲ್ಲಂಘಿಸುವವರ ವಿರುದ್ಧ ಕ್ರಮ
ಪಕ್ಷದ ಯಾವುದೇ ಶಾಸಕರು ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ರಾಷ್ಟ್ರೀಯ ನಾಯಕರು ಆ ಬಗ್ಗೆ ಯೋಚನೆ ಮಾಡ್ತಾರೆ. ಈಗಾಗಲೇ ಸಿಎಂ ಕೂಡ ಅದನ್ನ ಸ್ಪಷ್ಟಪಡಿಸಿದ್ದಾರೆ. ಸಂಪುಟ ಪುನಾರಚನೆ ಕುರಿತು ಸಿಎಂ ಹಾಗೂ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ ಎಂದರು. ನಮ್ಮ ಪಾರ್ಟಿ ಶಿಸ್ತು ಮತ್ತು ನಿಯಮದ ಅಡಿಯಲ್ಲಿದೆ. ಯಾವುದೇ ಅಭಿಪ್ರಾಯಗಳಿದ್ರೂ ಪಕ್ಷದ ವೇದಿಕೆಯಲ್ಲಿ ಹೇಳಬೇಕು. ಮಾಧ್ಯಮಗಳ ಮೂಲಕ ಕೆಲವರು ಬಹಿರಂಗ ಹೇಳಿಕೆ ನೀಡುತ್ತಿರುವುದನ್ನು ನೋಡಿದ್ದೇನೆ, ಅಂಥಹವರನ್ನ ಕರೆದು ಮಾತಾಡುತ್ತೇವೆ. ಕೆಲವರಿಗೆ ನೊಟೀಸ್ ಕೊಡಲು ಚಿಂತನೆ ನಡೆಸಿದ್ದೇವೆ. ಅದಕ್ಕೂ ಮುಂದೆ ಹೋದ್ರೆ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ ಎಂದೂ ಕಟೀಲ್ ಸ್ಪಷ್ಟಪಡಿಸಿದರು.
ಉಸ್ತುವಾರಿ ನೇಮಕ ಸರಿ ಇದೆ
ಜಿಲ್ಲಾ ಉಸ್ತುವಾರಿ ಸಚಿವರನ್ನು ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ನೇಮಿಸಲಾಗಿದೆ. ಉಸ್ತುವಾರಿ ಸಚಿವರನ್ನು ಅವರ ತವರು ಜಿಲ್ಲೆಯವರಿಗೆ ನೀಡಲಾಗುವುದಿಲ್ಲ. ಇದು ಬಿಜೆಪಿಯಲ್ಲಿರುವ ನಿಯಮ ಎಂದರು.
ಬಿಬಿಎಂಪಿ ಚುನಾವಣೆ ತಯಾರಿ
ರಾಜ್ಯದಲ್ಲಿ ಅತೀ ದೊಡ್ಡ ಪಾರ್ಟಿ ಬಿಜೆಪಿ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. ಬಿಜೆಪಿಗೆ ಬಿಬಿಎಂಪಿ ಗೆಲ್ಲುವ ಗುರಿಇದೆ, ಗೆದ್ದೇ ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಟೀಲ್, ಬಿಬಿಎಂಪಿ ಚುನಾವಣೆ ಬಗ್ಗೆ ಪೂರ್ವ ತಯಾರಿಯಾಗಿದೆ. ಶಕ್ತಿಕೇಂದ್ರಗಳಿಂದ ಮತಗಟ್ಟೆ ಆಗಿದೆ. ಪೇಜ್ ಕಮಿಟಿಗಳು ಯಶಸ್ವಿಯಾಗಿದೆ. ನಾಮಪತ್ರ ಜೋಡಣೆ ಮೂಲಕ ಕಾರ್ಯ ವಿಸ್ತರಣೆ ಆಗಿದೆ. ಬಿಬಿಎಂಪಿ ಚುನಾವಣೆ ಎದುರಿಸಲು ಹಲವು ಸುತ್ತಿನ ಮಾತುಕತೆಯನ್ನು ಇಂದಿನ ಸಭೆಯಲ್ಲಿ ನಡೆಸಲಾಗಿದೆ. ಚುನಾವಣೆಗೆ ಪ್ರಭಾರಿಗಳ ನೇಮಕ ಬಗ್ಗೆಯೂ ಚರ್ಚೆಯಾಗಿದೆ. ವಿಸ್ತಾರಕ್ ಯೋಜನೆ ಬಗ್ಗೆ ತೀರ್ಮಾನಿಸಿದ್ದೇವೆ ಸೇವೆಯೂ ಮಾಡಬೇಕು, ರಾಜಕಾರಣವೂ ಮಾಡಬೇಕು ಎಂದು ಮುಖಂಡರಿಗೆ ತಿಳಿ ಹೇಳಿದ್ದೇವೆ ಎಂದರು.
