Breaking NewsLatestರಾಜ್ಯಸುದ್ದಿ

ವರ್ಷಾಂತ್ಯಕ್ಕೆ ಬೈಯಪ್ಪನಹಳ್ಳಿ-ವೈಟ್ ಫೀಲ್ಡ್ ಮೆಟ್ರೋ ಆರಂಭ

ಬೆಂಗಳೂರು: ಬಹು ನಿರೀಕ್ಷಿತ ಬೈಯಪ್ಪನಹಳ್ಳಿ – ವೈಟ್‌ ಫೀಲ್ಡ್‌ ನಡುವಿನ 15.25 ಕಿ. ಮೀ. ಮೆಟ್ರೋ ಮಾರ್ಗ ಈ ವರ್ಷಾಂತ್ಯಕ್ಕೆ ಆರಂಭವಾಗುವ ನಿರೀಕ್ಷೆಯಿದೆ.

ಈ ಮಾರ್ಗದ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದ್ದ ಟಿನ್‌ ಫ್ಯಾಕ್ಟರಿ – ಕೆ. ಆರ್‌. ಪುರಂ ನಡುವಿನ ರಸ್ತೆಯನ್ನು ಮಾರತ್ತಹಳ್ಳಿ – ವೈಟ್‌ಫೀಲ್ಡ್ ಕಡೆಗೆ ವಿಸ್ತರಿಸಲು, ಕೆ. ಆರ್‌. ಪುರಂ ಮೆಟ್ರೋ ನಿಲ್ದಾಣದ ಬಳಿ ಅಗತ್ಯವಿದ್ದ 3500 ಚದರ ಮೀಟರ್‌ ಭೂಮಿಯನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಒಂದು ವರ್ಷದಿಂದ ಬಿಎಂಆರ್‌ಸಿಎಲ್‌ ರೈಲ್ವೆ ಮಂಡಳಿಗೆ ಮನವಿ ಮಾಡುತ್ತಾ ಬಂದಿತ್ತು. ಬಿಎಂಆರ್‌ಸಿಎಲ್‌, ರೈಲ್ವೆ ಮಂಡಳಿಯಿಂದ ವಶಪಡಿಸಿಕೊಂಡ ಸಮನಾದ ಭೂಮಿಯನ್ನು ಬೇರೆ ಕಡೆ ನೀಡಲಿದೆ.

ಕೆಂಪಾಪುರವರೆಗೆ ಮೆಟ್ರೋ ವಿಸ್ತರಣೆ: ವಿಮಾನ ನಿಲ್ದಾಣ ಮಾರ್ಗ ಸಂಪರ್ಕಕ್ಕೆ ಅನುಕೂಲ ಈ ಪ್ರದೇಶದಲ್ಲಿ ರಸ್ತೆ ವಿಸ್ತರಿಸಲು, ಹೊರ ವರ್ತುಲ ರಸ್ತೆ ಮೇಲ್ಸೇತುವೆಯಿಂದ ಕೆ. ಆರ್‌. ಪುರಂ ರೈಲು ನಿಲ್ದಾಣದವರೆಗಿನ ಒಂದು ಕಿ. ಮೀ. ವ್ಯಾಪ್ತಿಯಲ್ಲಿರುವ ಹೆಚ್ಚಿನ ಕಟ್ಟಡಗಳನ್ನು ಭಾಗಶಃ ಕೆಡವಲಾಗುತ್ತದೆ. ಕೆಲವು ಕಟ್ಟಡಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗುತ್ತದೆ. ಇದೇ ವೇಳೆ ಬೆನ್ನಿಗಾನಹಳ್ಳಿ ಬಳಿ ಸೇಲಂ ರೈಲು ಮಾರ್ಗದಲ್ಲಿ ಮೆಟ್ರೋ ಜಾಲವನ್ನು ಮುಂದಕ್ಕೆ ಕೊಂಡೊಯ್ಯಲು ಬೆಂಗಳೂರು ರೈಲ್ವೆ ವಿಭಾಗವು ಬಿಎಂಆರ್‌ಸಿಎಲ್‌ಗೆ ಹಸಿರು ನಿಶಾನೆ ತೋರಿಸಿದೆ. ಈ ಮೂಲಕ ಬೈಯ್ಯಪ್ಪನಹಳ್ಳಿ – ವೈಟ್‌ ಫೀಲ್ಡ್ ಕಾಮಗಾರಿಗೆ ಎದುರಾಗಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾದಂತಾಗಿದೆ. ಈಗಾಗಲೇ ಶೇ. 90ರಷ್ಟು ಸಿವಿಲ್‌ ಕಾಮಗಾರಿ ಮುಗಿದಿದೆ.

ಭೂ ಸ್ವಾಧೀನದಿಂದಲೇ ವಿಳಂಬ: ಬೈಯಪ್ಪನಹಳ್ಳಿ – ವೈಟ್‌ ಫೀಲ್ಡ್‌ ಮಾರ್ಗದ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ದೊಡ್ಡ ತಲೆನೋವಾಗಿತ್ತು. 2020ರ ಮಧ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗಡುವಿನೊಂದಿಗೆ ಯೋಜನೆಯನ್ನು ಏಪ್ರಿಲ್‌ 2017ರಲ್ಲಿ ಕೈಗೆತ್ತಿಕೊಳ್ಳಲಾಗಿದ್ದರೂ ಬಿಎಂಆರ್‌ಸಿಎಲ್‌ ಭೂ ಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತಸುವಲ್ಲಿ ಸಾಕಷ್ಟು ವಿಳಂಬ ಮಾಡಿತ್ತು. 2020ರಲ್ಲಿಯೇ ಕಾಮಗಾರಿ ಸಂಪೂರ್ಣ ಮುಗಿದು ಮೆಟ್ರೋ ಸಂಚಾರ ಆರಂಭವಾಗಬೇಕಿತ್ತು. ಈ ನಡುವೆ, 2022ರ ಡಿಸೆಂಬರ್‌ನಲ್ಲಿ ಕಾಮಗಾರಿ ಮುಗಿಯುವ ಭರವಸೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಯಾವೆಲ್ಲಾ ನಿಲ್ದಾಣಗಳು ಇರಲಿವೆ: ಬೈಯಪ್ಪನಹಳ್ಳಿ – ವೈಟ್‌ಫೀಲ್ಡ್‌ ಮೆಟ್ರೋ ಮಾರ್ಗದಲ್ಲಿ ಒಟ್ಟು 13 ನಿಲ್ದಾಣಗಳು ಇರಲಿವೆ. ವೈಟ್‌ಫೀಲ್ಡ್‌, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸಾದರ ಮಂಗಲ, ನಲ್ಲೂರ ಹಳ್ಳಿ, ಕುಂದಲ ಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್‌, ಗರುಡಾಚಾರ್‌ಪಾಳ್ಯ, ಮಹದೇವಪುರ, ಕೃಷ್ಣರಾಜಪುರ, ಬೆನ್ನಿಗಾನಹಳ್ಳಿ ನಿಲ್ದಾಣಗಳನ್ನು ಒಳಗೊಂಡಿದೆ.

ಟ್ರಾಫಿಕ್‌ ಜಾಮ್‌ಗೆ ಮುಕ್ತಿ: ಬೆಂಗಳೂರು ಗ್ರಾಮೀಣ ಭಾಗಗಳಿಂದ ಪ್ರತಿ ನಿತ್ಯ ನಗರಕ್ಕೆ ಬರುವ ಅಪಾರ ಸಂಖ್ಯೆಯ ಉದ್ಯೋಗಿಗಳು, ಐಟಿ – ಬಿಟಿ ಉದ್ಯೋಗಿಗಳಿಗೆ ಈ ಮಾರ್ಗ ಬಹು ನಿರೀಕ್ಷಿತ ಮಾರ್ಗವಾಗಿದೆ. ಇದೇ ವೇಳೆ ಜಯದೇವ ಮತ್ತು ಶ್ರೀ ಸತ್ಯಸಾಯಿ ಆಸ್ಪತ್ರೆಗೆ ತೆರಳುವ ಸಾವಿರಾರು ಜನರಿಗೂ ಸಾಕಷ್ಟು ಪ್ರಯೋಜನವಾಗಲಿದೆ. ಸದಾ ಟ್ರಾಫಿಕ್‌ ಜಾಮ್‌ನಿಂದ ಕೂಡಿರುವ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಹಾದು ಹೋಗುವುದನ್ನೇ ಜನರು ಎದುರು ನೋಡುತ್ತಿದ್ದಾರೆ.

ರೈಲು ಸಂಪರ್ಕ ಕೊಂಡಿ: ಬೈಯಪ್ಪನಹಳ್ಳಿ – ವೈಟ್‌ ಫೀಲ್ಡ್‌ ಮಾರ್ಗದಲ್ಲಿ ಕೆ. ಆರ್‌. ಪುರ ಹಾಗೂ ವೈಟ್‌ಫೀಲ್ಡ್‌ ರೈಲು ನಿಲ್ದಾಣಗಳಿವೆ. ಇವರೆಡಕ್ಕೂ ಮೆಟ್ರೋ ಸಂಪರ್ಕ ಕಲ್ಪಿಸುತ್ತಿದ್ದು, ಜನರಿಗೆ ಸಮಗ್ರ ಸಾರಿಗೆ ವ್ಯವಸ್ಥೆ ಸಿಗುತ್ತಿದೆ. ಈ ಎರಡೂ ಕಡೆ ರೈಲು ನಿಲ್ದಾಣಗಳಿಗೆ ಸುಮಾರು 30 ಮೀಟರ್‌ ಸಮೀಪದಲ್ಲಿ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇದರಿಂದ ರೈಲು ಪ್ರಯಾಣಿಕರು ಮೆಟ್ರೋ ಮೂಲಕ ನಗರವನ್ನು ಪ್ರವೇಶಿಸುವುದಕ್ಕೆ ಅನುಕೂಲವಾಗಿದೆ.

2027ಕ್ಕೆ 132 ಕಿ. ಮೀ. ವಿಸ್ತರಣೆ ಗುರಿ: 2022 ರಿಂದ 2027ರ ಅಂತ್ಯದಲ್ಲಿ ನಮ್ಮ ಮೆಟ್ರೋವನ್ನು 132.63 ಕಿ. ಮೀ.ಗೆ ವಿಸ್ತರಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಅವಧಿಯಲ್ಲಿ 91 ನಿಲ್ದಾಣಗಳನ್ನು ನಿರ್ಮಾಣ ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button