ಬ್ಯಾಂಕ್ ನಿಂದ ಫೋನ್ ಮಾಡುತ್ತಿದ್ದೇನೆ ಎಂದು ಹೇಳಿ ಹಣ ಕಬಳಿಸಿದ ಕಿರಾತಕ

ಕಾರವಾರ : ವ್ಯಕ್ತಿಯನ್ನು ನಂಬಿಸಿ ಒಟ್ಟು 2 ಲಕ್ಷದ 91 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಲಾದ ಬಗ್ಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬ್ಯಾಂಕ್ ಖಾತೆಗೆ ಕೆವೈಸಿ ಅಪಡೇಟ್ ಮಾಡಬೇಕೆಂದು ನಂಬಿಸಿ ವ್ಯಕ್ತಿಯೋರ್ವನ ಖಾತೆಯಿಂದ ಹಣ ವಂಚಿಸಿರುವ ಘಟನೆ ಇದಾಗಿದೆ.
ಶಿರಸಿ ತಾಲೂಕಿನ ಪುಟ್ಟನಮನೆ ನಿವಾಸಿ ಪರಮೇಶ್ವರ ಅನಂತ ಭಟ್ಟ ಮೋಸ ಹೋದ ವ್ಯಕ್ತಿ. ನಾನು ಎಸ್ಬಿಐ ಅಧಿಕಾರಿ. ನಿಮ್ಮ ಖಾತೆಯ ಕೆವೈಸಿ ಅಪ್ಡೇಟ್ ಮಾಡಬೇಕು. ಇಲ್ಲದಿದ್ರೆ ನಿಮ್ಮ ಖಾತೆ ಬ್ಲಾಕ್ ಆಗುತ್ತದೆ ಎಂದು ಹೆದರಿಸಿ, ಪರಮೇಶ್ವರ ಅನಂತ ಭಟ್ಟ ಅವರಿಂದ ಓಟಿಪಿ ಪಡೆದು ಮೋಸ ಮಾಡಲಾಗಿದೆ.
ತಾನು ಬ್ಯಾಂಕ್ ಅಧಿಕಾರಿ ಎಂದು ಹೇಳಿದ ವ್ಯಕ್ತಿಯ ಮಾತನ್ನು ನಂಬಿದ ಪರಮೇಶ್ವರ ಭಟ್ಟ ಅವರು ತಮ್ಮ ಬ್ಯಾಂಕ್ ಖಾತೆ ನಂಬರ್ ನೀಡಿದ್ದಾರೆ. ಅಲ್ಲದೆ,ಓಟಿಪಿ ನಂಬರ್ ಕೂಡಾ ಕೊಟ್ಟಿದ್ದಾರೆ. ಬಳಿಕ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಮೋಸ ಹೋಗಿರುವುದು ತಿಳಿದುಬಂದಿದೆ.
ಈ ರೀತಿ ಪ್ರಕರಣಗಳು ಪುನರಾವರ್ತನೆ ಆಗುತ್ತಿದ್ದು, ಗ್ರಾಹಕರು ಈ ರೀತಿಯ ಕರೆಗಳನ್ನು ನಂಬಿ ಮೋಸ ಹೋಗಬಾರದೆಂದು ಬ್ಯಾಂಕ್ ಅಧಿಕಾರಿಗಳು ಮನವಿ ಮಾಡಿದ್ದಾರೆ. ಈ ಕುರಿತು ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




