ಹುದ್ದೆಯಿಂದ ನಿರ್ಗಮಿಸಿದ ಬಿಎಸ್ವೈ ಕೊಡುಗೆಗೆ ಮೋದಿ, ಶಾ ಶ್ಲಾಘನೆ

ಬೆಂಗಳೂರು: ಪಕ್ಷಕ್ಕೆ ಮತ್ತು ಕರ್ನಾಟಕದ ಅಭಿವೃದ್ಧಿಗೆ ಬಿಎಸ್ ಯಡಿಯೂರಪ್ಪನವರು ನೀಡಿದ ಕೊಡುಗೆಯನ್ನು ಬಣ್ಣಿಸಲು ಶಬ್ದಗಳೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ದಶಕಗಳ ಕಾಲ ಅವರು ಕಷ್ಟಪಟ್ಟು ದುಡಿದಿದ್ದಾರೆ. ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಸಂಚರಿಸಿ ಜನರ ದನಿಯಾಗಿ ಕೆಲಸ ಮಾಡಿದ್ದಾರೆ. ಸಾಮಾಜಿಕ ಕಲ್ಯಾಣಕ್ಕಾಗಿ ತೋರಿದ ಬದ್ಧತೆಗಾಗಿ ಅವರಿಗೆ ಗೌರವಾರ್ಹರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನೂತನ ಸಿಎಂ ಬೊಮ್ಮಾಯ ಅವರಿಗೆ ಅಭಿನಂದನೆ ಸಲ್ಲಿಕೆ ಟ್ವೀಟ್ ಬಳಿಕ ಈ ಟ್ವೀಟ್ ಇದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಸ್ವೈ, ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇದೇ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡ ಬಿಎಸ್ವೈ ಕೊಡುಗೆ ಬಗ್ಗೆ ಶ್ಲಾಘಿಸಿದ್ದಾರೆ. ಪ್ರಧಾನಿಯಂತೆಯೇ, ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಶಾ, ಬಿಎಸ್ವೈ ಬಗ್ಗೆ ಹೊಗಳಿದ್ದಾರೆ.
ಅವರು ಪಕ್ಷ ಮತ್ತು ಕರ್ನಾಟಕದ ಜನತೆಗೆ ಸಲ್ಲಿಸಿದ ಸೇವೆ ಹೆಚ್ಚಿನದು. ಕರ್ನಾಟಕದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಬಲಗೊಳಿಸುವಲ್ಲಿನ ಅವರ ಕೊಡುಗೆ ಮತ್ತು ಕಠಿಣ ಪರಿಶ್ರಮ ಸ್ಫೂರ್ತಿದಾಯಕ. ಅವರು ಮುಂದೆಯೂ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮಾರ್ಗದರ್ಶನ ಮಾಡುವರೆಂಬ ವಿಶ್ವಾಸವಿದೆ ಎಂದು ಟ್ವಿಟ್ನಲ್ಲಿ ಶಾ ಹೇಳಿದ್ದಾರೆ.
ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಹೊತ್ತಲ್ಲಿ ಅವರನ್ನು ಮೋದಿ ಅಭಿನಂದಿಸಿರಲಿಲ್ಲ. ಅವರು ಸಿಎಂ ಆಗಿರುವವರೆಗೂ ಅವರನ್ನು ಹೈಕಮಾಂಡ್ ಎಷ್ಟು ಅವಮಾನಿಸಿತು, ಎಷ್ಟು ಕೀಳಾಗಿ ನಡೆಸಿಕೊಂಡಿತು ಎಂಬುದನ್ನು ರಾಜ್ಯದ ಜನ ಗಮನಿಸಿಯೇ ಇದ್ದಾರೆ. ಆದರೆ ಬಿಎಸ್ವೈ ಸಿಎಂ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಅವರನ್ನು ಪ್ರಧಾನಿ ಶ್ಲಾಘಿಸಿರುವುದು ಕೂಡ ರಾಜಕೀಯವಾಗಿ ವಿಶೇಷ ಅರ್ಥ ಹೊಂದಿದೆಯೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
