ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಭೇಟಿ ಬಗ್ಗೆ ಸ್ಪಷ್ಟತೆ ಇಲ್ಲ: ಸಂಸದ ಡಿ.ಕೆ. ಸುರೇಶ್

ರಾಮನಗರ: ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಧಾನ ನರೇಂದ್ರ ಮೋದಿಯವರನ್ನು ಭೇಟಿ ಮಾಡಿರುವುದು ಯಾವ ಉದ್ದೇಶದಿಂದ ಎನ್ನುವುದಕ್ಕೆ ನನ್ನಲ್ಲಿ ಸ್ಪಷ್ಟತೆ ಇಲ್ಲವೆಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಪ್ರಧಾನಿಗಳನ್ನು ಬೇಟಿ ಮಾಡಿದ್ದರೋ ಅಥವಾ ಬೇರೆ ಯಾವ ಉದ್ದೇಶದಿಂದ ಮಾಡಿದ್ದರೋ ಎನ್ನುವುದನ್ನು ಹೇಗೆ ಹೇಳುವುದು. ಅವರು ಬೇರೆ ಕಾರಣಗಳಿಗೂ ಭೇಟಿ ಮಾಡಿರಬಹುದೆಂದರು. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ಹೇಳಿದ್ದು, ಯೋಜನೆ ಅನುಷ್ಠಾನಕ್ಕೆ ತರುವಂತೆ ತಿಳಿಸಿದೆ. ಈ ಯೋಜನೆ ಆಗಲೇ ಬೇಕು ಅಂತಲೂ ಹೇಳಿದೆ ಎಂದರು.
ಸುಪ್ರೀಂ ಕೋರ್ಟ್ ಕೂಡ ನೀರನ್ನು ಮೇಕೆದಾಟು ಯೋಜನೆಗೆ ಬಳಸಿಕೊಳ್ಳಬಹುದೆಂದು ಅನುಮತಿ ನೀಡಿದೆ. ನಾವು ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗಷ್ಟೇ ಯೋಜನೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತೆ ವಿನಃ ಒಂದು ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೆಚ್ಚಿಗೆ ಮಾಡುವುದಿಲ್ಲವೆಂದು ಎಂದು ಸ್ಪಷ್ಟಪಡಿಸಿದರು.
ತಮಿಳುನಾಡು ಸರ್ಕಾರಕ್ಕೆ ಇರುವ ಇಚ್ಛಾಶಕ್ತಿ ರಾಜ್ಯಕ್ಕೆ ಏಕಿಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರಕಾರ ಇದೆ. ಈ ವಿಷಯದಲ್ಲಿ ಸರ್ವ ಪಕ್ಷದವರನ್ನ ಕರೆದುಕೊಂಡು ಹೋದರು ಸಂತೋಷ ಇಲ್ಲವಾದ್ರು ಸಂತೋಷ ಎಂದರು.
ನಮಗೆ ಮೇಕೆದಾಟು ಯೋಜನೆ ಆಗಬೇಕು ಅಷ್ಟೆ. ಯಡಿಯೂರಪ್ಪ ಅವರು ಮೋದಿ ಅವರನ್ನು ಮೇಕೆದಾಟು ವಿಚರಕ್ಕೊ ಅಥವಾ ರಾಜಕೀಯವಾಗಿ ಭೇಟಿ ಮಾಡಿದ್ದರೊ ನನಗೆ ಗೊತ್ತಿಲ್ಲ.
ಸಿಎಂ ಹಾಗೂ ಮೋದಿ ಇಬ್ಬರೆ ಗೌಪ್ಯವಾಗಿ ಭೇಟಿ ಯಾಗಿರುವುದರಿಂದ ಏನ್ ಚರ್ಚೆಯಾಗಿದೆ ಅಂತ ಹೇಳೋದಾದರೂ ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯದಿಂದ ಕೇಂದ್ರ ಮಂತ್ರಿಗಳಾಗಿರುವವರು ಇದ್ದಾರೆ ಅವರನ್ನಾದ್ರು ಜೊತೆಯಲ್ಲಿ ಕರೆದುಕೊಂಡು ಹೋಗಿ ಮೋದಿ ಬಳಿ ಚರ್ಚೆ ಮಾಡಬೇಕಾಗಿತ್ತು. ಅದ್ದರಿಂದ ಯಡಿಯೂರಪ್ಪ ಅವರು ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ್ದರೋ ಅಥವಾ ಭದ್ರಾ, ಕೃಷ್ಣ ಯೋಜನೆ ಬಗ್ಗೆ ಮಾತನಾಡಿದ್ದರೋ ಎನ್ನುವುದು ಯಾರಿಗೆ ಗೊತ್ತು. ಅವರಿಬ್ಬರು ಗೌಪ್ಯವಾಗಿ ಮಾತನಾಡಿರುವುದರಿಂದ ಯಾವುದರ ಬಗ್ಗೆ ಮಾತನಾಡಿದ್ದಾರೆ ಎನ್ನುವುದಕ್ಕೆ ನನ್ನಲ್ಲಿ ಖಂಡಿತವಾಗಿ ಸ್ಪಷ್ಟತೆ ಇಲ್ಲವೆಂದರು.
