ಸ್ವಾಮೀಜಿಗಳ ಮೇಲೆ ಗೌರವವಿದೆ, ಯಾವ್ದ್ ಯಾವ್ದಕ್ಕೋ ಲಿಂಕ್ ಮಾಡ್ಬೇಡಿ: ಮಾಧ್ಯಮದವರ ಮೇಲೆ ಸಿದ್ದರಾಮಯ್ಯ ಗರಂ

ಮೈಸೂರು: ಮಾಧ್ಯಮದವರು ನೀವೇ ಪ್ರಶ್ನೆ ಕೇಳುತ್ತೀರಾ, ನೀವೇ ವಿವಾದ ಮಾಡುತ್ತೀರಾ, ಯಾವುದಕ್ಕೋ ಯಾವುದನ್ನು ಲಿಂಕ್ ಮಾಡಿ ವಿವಾದ ಸೃಷ್ಟಿ ಮಾಡುತ್ತೀರಾ, ನಾನು ನಿನ್ನೆ ಹಿಜಾಬ್ ಪದವನ್ನೇ ಬಳಸಿಲ್ಲ ಎಂದು ಮಾಧ್ಯಮದವರ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನೀವೇ ಪ್ರಶ್ನೆ ಕೇಳಿ, ನೀವೇ ವಿವಾದ ಮಾಡುತ್ತೀರಾ, ನಾನು ಸ್ವಾಮೀಜಿಗಳ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ ಎಂದರು. ನಿನ್ನೆ ನಾನು ಹಿಜಾಬ್ ಪದವನ್ನೇ ಬಳಸಿಲ್ಲ. ಹಿಜಾಬ್ ಬೇರೆ ದುಪ್ಪಟ್ಟಾವೇ ಬೇರೆ, ಬುರ್ಕಾನೇ ಬೇರೆ. ಜನ ಸಾರ್ವಜನಿಕವಾಗಿ ಯಾವ ಯಾವ ವಸ್ತು ಬಳಸುತ್ತಾರೆ ಎಂದು ಹೇಳಿದ್ದೇನೆ. ಇದನ್ನು ನೀವು ಯಾವುದ್ಯಾವುದಕ್ಕೋ ಲಿಂಕ್ ಮಾಡಿ ವಿವಾದ ಸೃಷ್ಟಿ ಮಾಡಿದ್ದೀರಿ ಎಂದು ಮಾಧ್ಯಮದವರ ಮೇಲೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಹಿಂದಿನಿಂದಲೂ ಸ್ವಾಮೀಜಿಗಳ ಮೇಲೆ ಅಪಾರ ಗೌರವವಿದೆ, ಮುಂದೆಯೂ ಇರುತ್ತದೆ. ನಾನು ಮಠಗಳ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ದುಪ್ಪಟ್ಟಾ ಹಾಕಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಹೇಳಿದ್ದೇನೆ. ನಾನು ಸಮವಸ್ತ್ರದ ವಿರೋಧಿಯಲ್ಲ, ಸಮವಸ್ತ್ರದ ಜೊತೆ ಅದೇ ಬಣ್ಣದ ದುಪ್ಪಟ್ಟಾಕ್ಕೆ ಅವಕಾಶ ನೀಡಿ ಎಂದು ಕೇಳಿದ್ದೇನೆ. ಇದರಲ್ಲಿ ತಪ್ಪೇನು, ನಾನು ಸಲಹೆ ಕೊಟ್ಟಿದ್ದೇನೆ ಸ್ವೀಕರಿಸುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿ ಗರಂ ಆಗಿ ಉತ್ತರ ನೀಡಿದರು.
