Breaking NewsLatestಚಿಕ್ಕಮಗಳೂರುಜಿಲ್ಲಾ ಸುದ್ದಿಸುದ್ದಿ
ತಮಿಳುನಾಡಿಗೆ 22 ವೈದ್ಯ ಕಾಲೇಜು: ಸಿ.ಟಿ ರವಿಗೆ ಕುಟುಕಿದ ಕಾಂಗ್ರೆಸ್

ಚಿಕ್ಕಮಗಳೂರು: ನೆರೆರಾಜ್ಯ ತಮಿಳುನಾಡಿಗೆ ಕೇಂದ್ರ ಸರ್ಕಾರದ ಸಂಪೂರ್ಣ ವೆಚ್ಚದಲ್ಲಿ 11 ಮೆಡಿಕಲ್ ಕಾಲೇಜುಗಳನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದು, ಇದಕ್ಕೆ ತಮಿಳುನಾಡಿನ ಉಸ್ತುವಾರಿ ಹೊತ್ತಿರುವ ಶಾಸಕ ಸಿ ಟಿ ರವಿ ಅವರಿಗೆ ಶಹಬ್ಬಾಷ್ ಗಿರಿ ಕೊಡುವುದಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಶಿವಾನಂದಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಶಹಭಾಷ್ ಗಿರಿ ಪಡೆದು ಸಿ ಟಿ ರವಿ ರಾಜ್ಯದ ಇಪ್ಪತೈದು ಸಂಸದರನ್ನು ಒಮ್ಮೆಯಾದರೂ ಒಟ್ಟಿಗೆ ಪ್ರಧಾನಮಂತ್ರಿ ಅವರಲ್ಲಿಗೆ ಕರೆದೊಯ್ದು ರಾಜ್ಯದ ಬೇಡಿಕೆಗಳು ಸಮಸ್ಯೆಗಳನ್ನು ಇತ್ಯರ್ಥಪಡಿಸಲಿ ಎಂದಿದ್ದಾರೆ.
ರಾಜ್ಯದಲ್ಲಿ ಮೇಕೆದಾಟು, ಮಹದಾಯಿ ಸಹಿತ ಹಲವು ನೀರಾವರಿ ಯೋಜನೆಗಳು, ಇನ್ನಷ್ಟು ಮೆಡಿಕಲ್ ಕಾಲೇಜುಗಳು ಹಾಗೂ ಏನೆಲ್ಲಾ ರಾಜ್ಯಕ್ಕೆ ಬೇಕು ಅವೆಲ್ಲವನ್ನೂ ಮಾಡಿಸಿಕೊಂಡು ಬಂದರೆ ತಮಗೆ ಪಕ್ಷಾತೀತವಾಗಿ ಜನತೆ ಬೆನ್ನುತಟ್ಟಲಿದ್ದಾರೆ. ತಮ್ಮ ರಾಜಕೀಯ ಗುರು ಅನಂತ್ಕುಮಾರ್ ಕಾರ್ಯವೈಖರಿಯನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ಹೇಲಿದ್ದಾರೆ.
ಅನಂತಕುಮಾರ್ ಎಂದಿಗೂ ನಿಮ್ಮಂತೆ ಆಕ್ರೋಶಭರಿತ ಭಾಷಣ ಮಾಡಲಿಲ್ಲ. ಯಾವುದೇ ಪಕ್ಷದ ನಾಯಕರಿಗೆ ಅಥವಾ ಕಾರ್ಯಕರ್ತರಿಗೆ ಅಗೌರವದಿಂದ ಮಾತನಾಡಲಿಲ್ಲ. ಮತ್ತು ನಿಮ್ಮಂತೆ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುತ್ತೇವೆ ಎಂದು ಹೇಳಲಿಲ್ಲ ಎಂದು ಕುಟುಕಿದ್ದಾರೆ.
ಆದರೂ ಅವರು ರಾಷ್ಟ್ರ ನಾಯಕರಾಗಿದ್ದರು. ಆಗಲೂ ಬಿಜೆಪಿ ಅಧಿಕಾರಕ್ಕೆ ಬರುತ್ತಿತ್ತು ನಿಮಗೆ ಏನಾಗಿದೆ. ಬಾಯಲ್ಲಿ ಕೆಂಡ ಬಗಲಲ್ಲಿ ದೊಣ್ಣೆ ಹಿಡಿದವರಂತೆ ಬಡಬಡಿಸುತ್ತಿರಿ. ತಮಗಲ್ಲದಿದ್ದರೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂಬ ಆ ಹುದ್ದೆಗಾದರೂ ಗೌರವ ಬೇಡವೇ ಎಂದು ಪ್ರಶ್ನಿಸಿದ್ದಾರೆ.
ಈ ಮಧ್ಯೆ ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜು ಏನಾಯ್ತು? ತಮಗೆ ನೆನಪಿದೆಯೇ? ಈ ವರ್ಷದ ಸಿಇಟಿ ನಲ್ಲಾದರೂ ಎಂಬಿಬಿಎಸ್ ವಿದ್ಯಾರ್ಥಿಗಳು ಸೇರುವಂತಾಗಲಿ. ಆದರೂ ತಮ್ಮ ಶಕ್ತಿ ಉಪಯೋಗಿಸಿ ವಿದ್ಯಾರ್ಥಿಗಳು ಸೇರ್ಪಡೆಯಾದರೆ, ಯಾದಗಿರಿ ಗದಗ ಕೊಪ್ಪಳ ಕೊಡಗು ಜಿಲ್ಲೆಗಳ ಎದುರು ಮರ್ಯಾದೆ ಉಳಿದೀತು ಅಲ್ಲವೇ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
