ರಾಜಕೀಯ ಉದ್ದೇಶದ ಪಾದಯಾತ್ರೆ ಕೈಬಿಡಿ: ಆರಗ ಮತ್ತೆ ಮನವಿ

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಕೊರೋನಾ ಯಾತ್ರೆ ಆಗುವುದು ಬೇಡ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಪಾದಯಾತ್ರೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಯವಿಟ್ಟು ನಿಮ್ಮ ರಾಜಕೀಯ ಉದ್ದೇಶದ ನಡಿಗೆ ಕೈಬಿಡಿ ಪಾದಯಾತ್ರೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಬೀರಬಹುದಾದ ಅಡ್ಡ ಪರಿಣಾಮದ ಬಗ್ಗೆ ಸರ್ಕಾರಕ್ಕೆ ಆತಂಕ ವಿದೆ ಎಂದರು.
ಈ ಕಾರಣಕ್ಕಾಗಿಯೇ ಸರ್ಕಾರ ಆರಂಭದಲ್ಲೇ ಪಾದಯಾತ್ರೆ ಮುಂದೂಡುವಂತೆ ಮನವಿ ಮಾಡಿತ್ತು.ಈಗ ನಮ್ಮ ಆತಂಕ ನಿಜವಾಗುತ್ತಿದೆ, ಕೊರೋನಾ ಬಗ್ಗೆ ಕಾಂಗ್ರೆಸ್ ನಾಯಕರು ಅಪ ಪ್ರಚಾರ ಮಾಡುತ್ತಿರುವುದಲ್ಲದೆ ವಿತಂಡವಾದ ಮಂಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಪಾದಯಾತ್ರೆಯಲ್ಲಿ ತೊಡಗಿಕೊಂಡಿದ್ದ ಕೆಲವು ನಾಯಕರಿಗೆ ಸೋಂಕು ತಗುಲಿದ್ದು, ಆಸ್ಪತ್ರೆ ಸೇರಿದ್ದಾರೆ.ಆ ಕಾರಣದಿಂದ ಮತ್ತೊಮ್ಮೆ ಕಾಂಗ್ರೆಸ್ ನಾಯಕರಿಗೆ, ಮನವಿ ಮಾಡುತ್ತೇನೆ, ನಿಮ್ಮ ನಿರ್ಧಾರವನ್ನು ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸದ್ಯಕ್ಕೆ ಪಾದಯಾತ್ರೆ ಕೈಬಿಡಿ ಎಂದರು.
ಕೊರೋನಾ, ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ, ಸಮಾಜದ ಎಲ್ಲಾ ಜನರೂ, ವಿಶೇಷವಾಗಿ, ಎಲ್ಲಾ ಕ್ಷೇತ್ರದ ಶ್ರಮಿಕ ವರ್ಗದವರೂ ಆತಂಕಗೊಂಡಿದ್ದಾರೆ. ಕಾಂಗ್ರೆಸ್ ಜನತೆಯ ಆಕ್ರೋಶಕ್ಕೆ ಗುರಿಯಾಗಿದ್ದು ಅವರ ಕ್ಷಮೆ ಕೇಳಬೇಕು ಎಂದು ಹೇಳಿದರು.
