ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 30ಕ್ಕೂ ಹೆಚ್ಚು ಜನ ಅಸ್ವಸ್ಥ

ಕೋಲಾರ : ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 30 ಕ್ಕೂ ಹೆಚ್ಚಿನ ಭಕ್ತಾಧಿಗಳು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಯಲ್ದೂರು ಹೋಬಳಿಯ ಬೀರಗಾನಹಳ್ಳಿ ಗ್ರಾಮದದಲ್ಲಿ ನಡೆದಿದಿದೆ. ಅಸ್ವಸ್ಥಗೊಂಡಿರುವವರು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಹೊಸ ವರ್ಷದ ಅಂಗವಾಗಿ ಶನಿವಾರ ಗ್ರಾಮ ದೇವತೆಯಾದ ಗಂಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಧ್ಯಾಹ್ನ ನೆರವೇರಿಸಿದ್ದರು. ಗ್ರಾಮದ ಎರಡು ಕುಟುಂಬಗಳು ಭಕ್ತಾದಿಗಳಿಗೆ ಚಿತ್ರಾನ್ನ ಮತ್ತು ಕೇಸರಿ ಬಾತ್ ಪ್ರಸಾದವಾಗಿ ತಯಾರಿಸಿ ಕೊಂಡು ಬಂದಿದ್ದರು ಎನ್ನಲಾಗಿದೆ. ಗ್ರಾಮದ ಹಲವರು ಪ್ರಸಾದವನ್ನು ಸ್ವೀಕರಿಸಿದ್ದಾರೆ. ಪ್ರಸಾದ ಸ್ವೀಕರಿಸಿದ್ದ ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯದಲ್ಲಿ ಏರು ಪೇರು ಕಂಡುಬಂದು ಸುಮಾರು 7-8 ಜನ ಯಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಬಂದಿದ್ದಾರೆ.
ಸಂಜೆ ಗ್ರಾಮದ ಮಕ್ಕಳು ಶಾಲೆಗಳಿಗೆ ಹೋಗಿ ವಾಪಸ್ಸು ಬಂದಾಗ ದೇವಸ್ಥಾನ ಪ್ರಸಾದ ಸ್ವೀಕರಿಸಿ ಮನೆಗಳಿಗೆ ಬಂದಿದ್ದಾರೆ. ರಾತ್ರಿ ಸುಮಾರು 9 ಗಂಟೆಯ ನಂತರ ಒಬ್ಬೊಬ್ಬರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ಅಸ್ವಸ್ಥಗೊಳ್ಳುತ್ತಿದ್ದಂತೆ ಯಲ್ದೂರು ಪ್ರಾಥಮಿಕ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿ ಮಕ್ಕಳ ವೈದ್ಯರಿಲ್ಲ ಎಂದು ಶ್ರೀನಿವಾಸಪುರ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಒಟ್ಟು 19 ಮಕ್ಕಳು ಹಾಗು 9 ಜನ ದೊಡ್ಡವರು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರು ಎಲ್ಲರೂ ಆರೋಗ್ಯವಂತರಾಗಿದ್ದಾರೆ. ಚಿಕಿತ್ಸೆ ಮುಂದುವರೆಯುತ್ತಿದೆ ಎಮದು ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದ್ದಾರೆ.
ತಾಲೂಕು ಆಡಳಿತಾಧಿಕಾರಿ ಎಂ ಸಿ ವಿಜಯ್, ಜಿಲ್ಲಾ ಮಕ್ಕಳ ತಜ್ಞ ಡಾ.ಚಂದನ್ ಹಾಗು ಮುತ್ತುಕಪಲ್ಲಿ ಮತ್ತು ಲಕ್ಷ್ಮಿಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಬೀರಗಾನಹಳ್ಳಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದು ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಗ್ರಾಮದಲ್ಲಿಯೇ ಬೀಡು ಬಿಟ್ಟಿದ್ದು, ಆ್ಯಂಬುಲೆನ್ಸ್ ಮೂಲಕವೇ ಚಿಕಿತ್ಸೆ ನೀಡಲು ಮುಂದಾಗಿರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
