ಹೊಸ ವರ್ಷದ ಮೊದಲ ದಿನವೇ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತ:12ಕ್ಕೂ ಹೆಚ್ಚು ಮಂದಿ ಸಾವು

ಜಮ್ಮು: ಹೊಸ ವರ್ಷದ ಮೊದಲ ದಿನವೇ ಜಮ್ಮು-ಕಾಶ್ಮೀರದ ಕಾಟ್ರಾ ಬೆಟ್ದದ ಮೇಲಿರುವ ಮಾತಾ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತಕ್ಕೆ(Stampede) ಸಿಲುಕಿ 12 ಮಂದಿ ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಸ್ಥಳೀಯ ಮಾತಾ ವೈಷ್ಣೋದೇವಿ ನಾರಾಯಣ ಸೂಪರ್ ಸ್ಪೆಷಾಲಿಟಿ(Mata Vaishnodevi Super Speciality Hospital) ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹೊಸ ವರ್ಷ 2022ರ ಪ್ರಯುಕ್ತ ದೇವಿ ದರ್ಶನ ಪಡೆಯಲು ಶುಕ್ರವಾರ ಸಂಜೆಯಿಂದಲೇ ಭಕ್ತರು ಅಪಾರ ಸಂಖ್ಯೆಯಲ್ಲಿ ಮಂದಿರಕ್ಕೆ ಬರತೊಡಗಿದ್ದರು. ಜನದಟ್ಟಣೆ ಹೆಚ್ಚಾಗಿ ನೂಕು ನುಗ್ಗಲು ಉಂಟಾದ ಪರಿಣಾಮ ನಸುಕಿನ 3 ಗಂಟೆ ವೇಳೆಯಲ್ಲಿ ಕಾಲ್ತುಳಿತ ಉಂಟಾದ ಪರಿಣಾಮ ದುರ್ಘಟನೆ ನಡೆದಿದೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ (Dgp Dilbagh Singh)ತಿಳಿಸಿದ್ದಾರೆ.
ಮೃತರ ಕುಟುಂಬಗಳಿಗೆ ಸರ್ಕಾರ ತಲಾ10 ಲಕ್ಷ ಪರಿಹಾರ ಘೋಷಿಸಲಾಗಿದೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ(Pmnrf)ಯಿಂದಲೂ ತಲಾ 2 ಲಕ್ಷ ಪರಿಹಾರ ಘೋಷಿತವಾಗಿದ್ದು ಗಾಯಾಳುಗಳಿಗೆ ಜಮ್ಮು-ಕಾಶ್ಮೀರ ರಾಜ್ಯ ಸರ್ಕಾರದಿಂದ 2 ಲಕ್ಷಷ ಹಾಗೂ ಪ್ರಧಾನಿ ಪರಿಹಾರ ನಿಧಿಯಿಂದ ತಲಾ 50 ಸಾವಿರ ಪರಿಹಾರ ಪ್ರಕಟಿಸಲಾಗಿದೆ.
ಅವಘಟದ ಕುರಿತು ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಧಾನಿ ಭಕ್ತರ ಸಾವಿನ ಸುದ್ದಿ ಕೇಳಿ ಅತೀವ ದುಃಖವಾಗಿದೆ ಎಂದು ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹೇಳಿದ್ದಾರೆ.
ಕೇಂದ್ರ ಸಚಿವರಾದ ರಾಜ್ ನಾಥ್ ಸಿಂಗ್(Rajnath Singh), ಡಾ.ಜಿತೇಂದ್ರ ಸಿಂಗ್ ಮತ್ತಿತರರು ಟ್ವೀಟ್ ಮಾಡಿ ದುರ್ಘಟನೆ ಕುರಿತು ನೋವು ತೋಡಿಕೊಂಡಿದ್ದಾರೆ.
