
ಬೆಂಗಳೂರು: ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದಿಲ್ಲ ಎಂದು ಗರ್ವದಿಂದ ಮಾತನಾಡುತ್ತಿದ್ದ ಬಿಜೆಪಿಗೆ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಗರ್ವಭಂಗ ತಂದಿದೆ ಎಂದು ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಹಳೇ ಮೈಸೂರು ಭಾಗ ನಮ್ಮದು ಎಂದು ಬೀಗುತ್ತಿದ್ದ ಜೆಡಿಎಸ್ ಗೆ ಮುಖಭಂಗವಾಗಿದೆ ಎಂದರು.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್, ಇತರೆ ಪಕ್ಷಗಳಿಗಿಂತ ಹೆಚ್ಚಿನ ಪ್ರಮಾಣದ ಮತಗಳನ್ನು ಪಡೆದಿದೆ. ಕಾಂಗ್ರೆಸ್ ಗೆ 44.283 ಮತಗಳನ್ನು ಪಡೆದರೆ, ಬಿಜೆಪಿ
37.283 ಹಾಗೂ ಜೆಡಿಎಸ್ 10.249 ಪಡೆದಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ 45 ಸಾವಿರ ಮತಗಳನ್ನು ಹೆಚ್ಚಾಗಿ ಪಡೆದಿದೆ ಎಂದು ಹೇಳಿದ್ದರು. ಆದರೆ ಈ ಚುನಾವಣೆ ಅವರ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ ಎಂದು ಹೇಳಿದರು.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ನೆಲೆಗಳಲ್ಲಿ ನಮಗೆ ಹೆಚ್ಚಿನ ಬೆಂಬಲ ಸಿಕ್ಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾವಿಯಲ್ಲಿ ಇಬ್ಬರು ಬಿಜೆಪಿ ಸಂಸದರಿದ್ದರೂ, 11 ಶಾಸಕರಿದ್ದರೂ ಕಾಂಗ್ರೆಸ್ 1286 ಮತಗಳ ಅಂತರದಿಂದ ಗೆದ್ದಿದ್ದೇವೆ. ಹುಬ್ಭಳ್ಳಿ, ಧಾರವಾಡ, ಹಾವೇರಿ ಭಾಗದಲ್ಲಿ ಹಾಲಿ ಮುಖ್ಯಮಂತ್ರಿ, ಮಾಜಿ ಸಿಎಂ ಜಗದೀಶ್ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಕ್ಷೇತ್ರವಾಗಿದೆ. ಈ ಭಾಗದಲ್ಲಿ ಕಾಂಗ್ರೆಸ್ ನ ಕೇವಲ 3 ಶಾಸಕರು ಮಾತ್ರ ಇದ್ದಾರೆ. ಆದರೂ ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಸಲೀಂ ಅಹ್ಮದ್ ಅವರು 837 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
ಬಿಜಾಪುರದ ಎರಡು ಕ್ಷೇತ್ರಗಳ ಪೈಕಿ ಕಾಂಗ್ರೆಸ್ಸಿನ ಸುನೀಲ್ ಪಾಟೀಲ್ ಅವರು 1026 ಮತಗಳಿಂದ ಗೆದ್ದಿದ್ದಾರೆ. ದಕ್ಷಿಣ ಕನ್ನಡದಲ್ಲಿ ಶ್ರೀನಿವಾಸ ಪೂಜಾರಿ ಅವರ ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲೆ ಗೆದ್ದಿದ್ದಾರೆ. ಉತ್ತರ ಕರ್ನಾಟಕದಲ್ಲಿ ವೀರಶೈವ ಸಮಾಜ ಹೆಚ್ಚಾಗಿದೆ. ಹೀಗಾಗಿ ಇದು ಬಿಜೆಪಿ ನೆಲೆ ಎಂಬ ಭಾವನೆ ಇತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಜತೆಗೆ ಮುಂದುವರಿದ ಸಮಾಜಗಳ ಬೆಂಬಲವಿದೆ ಎಂಬುದು ಸಾಬೀತಾಗಿದೆ ಎಂದರು.
ಹಳೇ ಮೈಸೂರು ಭಾಗದ ಮಂಡ್ಯದಲ್ಲಿ 6 ಜೆಡಿಎಸ್ 1 ಬಿಜೆಪಿ ಶಾಸಕರಿದ್ದರೂ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಇನ್ನು ತುಮಕೂರಿನಲ್ಲೂ ಜೆಡಿಎಸ್ ಶಾಸಕರಿದ್ದರೂ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್ ನ ಎರಡನೇ ಆದ್ಯತೆ ಮತಗಳು ಬಿದ್ದಿರುವ ಕಾರಣ ಜೆಡಿಎಸ್ ಗೆದ್ದಿದೆ. ಕೋಲಾರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ.
ಬದಲಾಣೆಯ ಪರ್ವ :
1989ರಲ್ಲಿ ವಿರೇಂದ್ರ ಪಾಟೀಲ್ ಅವರು 1999ರಲ್ಲಿ ಕೃಷ್ಣ ಅವರು ಕಾಂಗ್ರೆಸ್ ಪರ ಅಲೆ ತಂದ ರೀತಿ, ಈಗ ಕಾಂಗ್ರೆಸ್ ಪರವಾಗಿ ಬದಲಾವಣೆ ಪರ್ವ ಆರಂಭವಾಗಿದೆ. ಚುನಾವಣೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದೆಲ್ಲ ಹೇಳಿಕೆ ಕೊಟ್ಟರು. ಆದರೆ ಚುನಾವಣೆ ಫಲಿತಾಂಶ ಬಂದ ನಂತರ ಬಾಯಿ ಬಿಟ್ಟಿಲ್ಲ ಎಂದು ಛೇಡಿಸಿದರು.
ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಿಸಬೇಕು ಎಂದು ಮಂತ್ರಿಗಳಾದಿಯಾಗಿ ಬಿಜೆಪಿ ಘಟಾನುಘಟಿ ಮುಖಂಡರು ರಾಜ್ಯಾದ್ಯಂತ ಜನಸ್ವರಾಜ್ ಪ್ರವಾಸ ಮಾಡಿದ್ದರು. ಆದರೂ ಕಾಂಗ್ರೆಸ್ ಗೆ ಹೆಚ್ಚಿನ ಮತ ಬಂದಿದೆ. ಇನ್ನು ಇದೊಂದು ಅವಲಂಬಿತ ಸರ್ಕಾರ. ಇದು ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯದಿಂದ ಚುನಾಯಿತ ಪ್ರತಿನಿಧಿಗಳು ನಮಗೆ ಹೆಚ್ಚಿನ ಮತ ನೀಡಿದ್ದಾರೆ ಎಂದು ಧೃವನಾರಾಯಣ ವಿಶ್ಷೇಷಿಸಿದರು.
ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹಾಗೂ ಪಕ್ಷದ ಎಲ್ಲ ನಾಯಕರ ಸಂಘಟಿತ ಹೋರಾಟದ ಪ್ರತಿಫಲ ಈ ಚುನಾವಣೆಯಲ್ಲಿ ಹೆಚ್ಚು ಮತ ಪಡೆಯಲು ಸಾಧ್ಯ ಆಗಿದೆ’ ಎಂದರು.
ಬಿಜೆಪಿಗೆ ಸೋಲುವ ಭೀತಿ :
ಬಿಜೆಪಿಗೆ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲ ಎಂದ ಅವರು, ಕಳೆದ ವರ್ಷ ನಡೆಯಬೇಕಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಈವರೆಗೂ ಮಾಡಿಲ್ಲ. ಸೋಲುವ ಭೀತಿ ಇದಕ್ಕೆ ಕಾರಣ ಎಂದರು.
ಬಿಜೆಪಿ ತೋರಿಕೆಗೆ ಸಾಮಾಜಿಕ ನ್ಯಾಯ ಎನ್ನುತ್ತದೆ. ಆದರೆ ಒಂದು ಸ್ಥಾನವನ್ನು ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ, ಮಹಿಳೆಯರಿಗೆ ನೀಡಿಲ್ಲ. ಬಿಜೆಪಿ ಕೇವಲ ಬಸವಣ್ಣನವರ ಫೋಟೋ ಇಟ್ಟುಕೊಳ್ಳುತ್ತದೆ. ಅವರ ತತ್ವ ಪಾಲಿಸುವುದಿಲ್ಲ’ಎಂದು ಟೀಕಿಸಿದರು.




