ದಾವಣಗೆರೆಯಲ್ಲಿ ರೈತ ಸಂಘಟನೆಗಳ ಹೋರಾಟ: ಹಲವೆಡೆ ರೈತರ ಬಂಧನ, ಆಕ್ರೋಶ

ದಾವಣಗೆರೆ: ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿ ವಿರೋಧಿಸಿ ದಾವಣಗೆರೆಯಲ್ಲಿ ರೈತರ ಹೋರಾಟದ ಕಾವು ಜೋರಾಗಿದೆ. ಹಲವೆಡೆ ಹೆದ್ದಾರಿ, ರಸ್ತೆ ತಡೆ ನಡೆಸಲು ಮುಂದಾದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ಯತ್ನಿಸಿದ 20 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ ಘಟನೆ ನಡೆಯಿತು.
ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳನ್ನ ವಿರೋಧಿಸಿ ಇಂದು ರೈತ ಸಂಘಟನೆಗಳಿಂದ ಬಂದ್ ನಡೆಸಲಾಗುತ್ತಿದ್ದು, ದಾವಣಗೆರೆ ಹೊರ ಭಾಗದ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ರಾಷ್ಟ್ರೀಯ ಹೆದ್ದಾರಿ 4 ನ್ನ ತಡೆದು ಪ್ರತಿಭಟನೆಗೆ ಯತ್ನಿಸಿದ ಸುಮಾರು 20 ಕ್ಕೂ ಹೆಚ್ವು ಪ್ರತಿಭಟನಾಕಾರರನ್ನ ಪೊಲೀಸರು ಬಂಧನ ಮಾಡಿದ ಕಾರಣ ರೈತ ಸಂಘಟನೆಗಳ ಪ್ರಮುಖರು, ಪ್ರತಿಭಟನಾಕಾರರು ಪೊಲೀಸರ ವಿರುದ್ಧವೇ ಘೋಷಣೆಗಳನ್ನ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ಅನುಮತಿ ಇಲ್ಲದಿದ್ದರೂ ಪ್ರತಿಭಟನಾಕಾರರು ಹೆದ್ದಾರಿ ಬಂದ್ ಮಾಡಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳ ಕಾರ್ಯಕರ್ತರನ್ನ ಬಂಧಿಸಿ ಕರೆದೊಯ್ದದಿದ್ದಾರೆ.
ಪ್ರತಿಭಟನಾಕಾರರು ಬಸ್ ಸಂಚಾರ ಬಂದ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸರ್ಕಾರಿ ವಾಹನ, ಎಸ್ಕಾಟ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭಗೊಂಡಿತು. ಪ್ರಯಾಣಿಕರಿಗೆ ತೊಂದರೆ ಆಗದಂತೆ ಖುದ್ದು ಫೀಲ್ಡ್ ಗೆ ಇಳಿದ ಕೆಎಸ್ ಆರ್ ಟಿಸಿ ಡಿಸಿ ಸಿದ್ದೇಶ್, ಕೇಂದ್ರ ಬಸ್ ನಿಲ್ದಾಣದಲ್ಲಿ ಖುದ್ದು ಫೀಲ್ಡ್ ಗೆ ಇಳಿದು ಬಸ್ ಓಡಿಸುವಂತೆ ಸೂಚಿಸಿದರು. ಬಳಿಕ ಎಂದಿನಂತೆ ಬಸ್ ಸಂಚಾರ ಶುರುವಾಯಿತು.
ರಸ್ತೆಗೆ ತರಕಾರಿ ಸುರಿದು ಆಕ್ರೋಶ ವ್ಯಕ್ತಪಡಿಸಿದ ರೈತರು ಜಯದೇವ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದರು. ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘಟನೆಗಳು, ಬೆಲೆ ಏರಿಕೆ ಯಾಗುತ್ತಿದೆ, ರೈತರ ಬೆಳೆಗೆ ಸರಿಯಾದ ಬೆಲೆಸಿಗುತ್ತಿಲ್ಲ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದರು.




