ವನ್ಯಪ್ರಾಣಿ ಬೇಟೆಗೆ ಬಂದಿದ್ದವರ ಮೇಲೆ ಗುಂಡೇಟು

ಮಂಡ್ಯ: ವನ್ಯಪ್ರಾಣಿಗಳ ಬೇಟೆಯಲ್ಲಿ ನಿರತರಾಗಿದ್ದ ನಾಲ್ಕು ಮಂದಿ ಕಳ್ಳರ ತಂಡವೊಂದು ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳಿಗೆ ಎದುರಾಗಿ ಗುಂಡೇಟು ತಿಂದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಸವನಬೆಟ್ಟದ ಬಳಿ ನಡೆದಿದೆ.
ನಾಲ್ವರು ಕಳ್ಳರು ಜಿಂಕೆಯೊಂದನ್ನು ಕೊಂದು ಹೆಗಲ ಮೇಲೆ ಹೊತ್ತುಕೊಂಡು ಬರುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಗಸ್ತಿನಲ್ಲಿದ್ದ ವನಪಾಲಕರಿಗೆ ಅಚಾನಕ್ ಆಗಿ ಎದುರಾಗಿದ್ದಾರೆ. ತಕ್ಷಣವೇ ಎಲ್ಲರೂ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಎಚ್ಚೆತ್ತ ವನಪಾಲಕರು ಶೂಟೌಟ್ ಮಾಡಿದ ಪರಿಣಾಮ ವೆಂಕಟೇಶ್ ಎಂಬಾತ ಗುಂಡೇಟು ತಿಂದು ಸಿಕ್ಕಿಹಾಕಿಕೊಂಡಿದ್ದಾನೆ. ಇನ್ನುಳಿದ ಮೂವರು ಪರಾರಿಯಾಗಿದ್ದಾರೆ.
ಬೇಟೆಗೆಂದು ಅರಣ್ಯಕ್ಕೆ ತೆರಳಿದ್ದ ಈ ತಂಡದವರು ಬಂದೂಕು ಉಪಯೋಗಿಸಿ ಜಿಂಕೆಯೊಂದನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ಶಿಕಾರಿಗೆಂದು ಇವರು ತೆರಳಿದ್ದು, ಅದೇ ಸಂದರ್ಭದಲ್ಲಿ ವನಪಾಲಕರು ಗಸ್ತಿಗೆ ತೆರಳಿದ ಪರಿಣಾಮ ವಿಷಯ ಬೆಳಕಿಗೆ ಬಂದಿದೆ.
ಹಲಗೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಗುಂಡೇಟು ತಿಂದ ವೆಂಕಟೇಶ್ ಎಂಬಾತನಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂತೆಯೇ ತಪ್ಪಿಸಿಕೊಂಡ ಮೂವರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ತನಿಖೆ ಮುಂದುವರೆದಿದೆ.




