ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಪ್ರವಾಸಿಗ ; ಗೋಕರ್ಣದ ಓಂ ಬೀಚ್ ನಲ್ಲಿ ನಡೆದ ಘಟನೆ
ಕಾರವಾರ : ಸೆಲ್ಫಿ ತೆಗೆಯಲು ಹೋದ ಪ್ರವಾಸಿಗನೊಬ್ಬ ನೋಡ ನೋಡುತ್ತಲೇ ಸಮುದ್ರ ಪಾಲಾಗಿರುವ ಘಟನೆ ಉತ್ತ ರಕನ್ನಡ ಜಿಲ್ಲೆಯ ಗೋಕರ್ಣದ ಓಂ ಬೀಚ್ನಲ್ಲಿ ಶನಿವಾರ ನಡೆದಿದೆ.
ಹಾನಗಲ್ ಮೂಲದ ಕುಮಾರ ಶೇಕಪ್ಪ ಕಮಾಟಿ (35) ಕಣ್ಮರೆಯಾದ ಪ್ರವಾಸಿಗ. ಹಾನಗಲ್ನಿಂದ ಪ್ರವಾಸಕ್ಕೆಂದು ಒಟ್ಟು 12 ಮಂದಿ ಸೇರಿ ಬಂದಿದ್ದರು. ಸಮುದ್ರದ ಸಮೀಪ ಕಲ್ಲುಗಳಿಗೆ ಅಪ್ಪಳಿಸುತ್ತಿದ್ದ ಅಲೆಗಳನ್ನು ನೋಡಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು.
ಅದರಲ್ಲಿ ಕುಮಾರ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಅಲೆ ಅಪ್ಪಳಿಸಿ ನೀರಿಗೆ ಬಿದ್ದಿದ್ದಾನೆ. ತಕ್ಷಣ ಕೂಗಿಕೊಂಡಿದ್ದು, ಕೂಡಲೇ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದರು.ಆದರೆ ಅಲೆಗಳ ಅಬ್ಬರಕ್ಕೆ ಆತ ಕೊಚ್ಚಿಕೊಂಡು ಬಹುದೂರ ಹೋಗಿದ್ದಾನೆ. ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆ ಶೋಧ ಕಾರ್ಯ ಸಾಧ್ಯವಾಗದೇ ಲೈಫ್ ಗಾರ್ಡ್ ಸಿಬ್ಬಂದಿ ವಾಪಸ್ ಆಗಿದ್ದಾರೆ.
ಈ ಎಲ್ಲ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ರಕ್ಷಣೆಗೆ ತೆರಳಿದ ಲೈಫ್ ಗಾರ್ಡ್ ಗಾಯಗೊಂಡಿದ್ದಾರೆ.ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
